ಅಹಿಂಸೆಯ ಮಹಾಪ್ರವಾದಿ: ವರ್ಧಮಾನ ಮಹಾವೀರನ ಕಥೆ

ವರ್ಧಮಾನ ಮಹಾವೀರ

ಎರಡೂವರೆ ಸಾವಿರ ವರುಷಗಳ ಹಿಂದಿನ ಸಂಗತಿಯು. ಆಗ ಉತ್ತರ ಭಾರತದಲ್ಲಿ ಕ್ಷತ್ರಕುಂಡ ಎಂಬ ಹೆಸರಿನದೊಂದು ಪಟ್ಟಣವಿತ್ತು. ಅಲ್ಲಿ ಸಿದ್ಧಾರ್ಥನೆಂಬ ಅರಸನು ರಾಜ್ಯವಾಳುತ್ತಿದ್ದನು. ತ್ರಿಶಲಾದೇವಿಯೆಂಬವಳು ಆತನ ಹೆಂಡತಿ; ಅವಳು ವೈಶಾಲೇದೇಶದ ರಾಜನ ಮಗಳು, ರಾಜ ಸಿದ್ಧಾರ್ಥ, ಮಹಾವೀರ ರಾಣಿ ತ್ರಿಶಲಾದೇವಿ ಇಬ್ಬರೂ ಜಾಣರೂ ಒಳ್ಳೆಯ ಗುಣಗಳಿಂದ ಕೂಡಿದವರೂ ಆಗಿದ್ದರು. ಅವರ ಹೊಟ್ಟೆಯಿಂದ ಸುಂದರನಾದ ಒಬ್ಬ ಮಗನು ಹುಟ್ಟಿದನು. ಅವನಿಗೆ ‘ವರ್ಧಮಾನ‘ ಎಂಬ ಹೆಸರನ್ನಿಟ್ಟರು.

ವರ್ಧಮಾನನಿಗೆ ಎಂಟು ವರುಷ ತುಂಬಿದೊಡನೆಯೆ ಅವನ ವಿದ್ಯಾಭ್ಯಾಸ ಪ್ರಾರಂಭವಾಯಿತು. ಅವನು ಬಹಳ ಚುರುಕುಬುದ್ಧಿಯವ. ಗುರುಗಳು ಯಾವುದಾದರೊಂದು ವಿಷಯವನ್ನು ಹೇಳಿದರೆ ಅದನ್ನು ಅವನು ಒಮ್ಮೆಲೇ ತಿಳಿದುಕೊಳ್ಳುವನು. ಗುರುಗಳು ತಿರುಗಿ ಕೇಳಿದರೆ ಅವನು ತಪ್ಪದೆ ಎಲ್ಲವನ್ನೂ ಹೇಳುತ್ತಿದ್ದನು. ಅವನ ಈ ಅಗಾಧವಾದ ಜ್ಞಾನವನ್ನು ಕಂಡು ಗುರುಗಳು ಬೆರಗಾಗುತ್ತಿದ್ದರು. ವರ್ಧಮಾನನು ಎಲ್ಲ ವಿಷಯಗಳನ್ನೂ ಬೇಗಬೇಗನೆ ಕಲಿತುಕೊಂಡನು. ಅವನ ಜಾಣತನಕ್ಕಾಗಿ ಎಲ್ಲರೂ ಅವನನ್ನು ಪ್ರೀತಿಸುತ್ತಿದ್ದರು.

ಚಿಕ್ಕಂದಿನಿಂದಲೂ ವರ್ಧಮಾನನು ಧೈರ್ಯಶಾಲಿಯಾಗಿದ್ದನು. ಆಟ-ಪಾಟಗಳಲ್ಲಿ ಯಾವಾಗಲೂ ಅವನೇ ಮುಂದು. ಓರಗೆಯ ಬಾಲಕರೊಡನೆ ಓಡಾಡುವುದು, ಜಿಗಿದಾಡುವುದು ಅವನಿಗೆ ಬಹಳ ಸೇರುತ್ತಿತ್ತು. ಸುಂದರವಾದ ವನಗಳನ್ನು ನೋಡಲೂ ಅವನು ಮೇಲಿಂದ ಮೇಲೆ ತಂದೆಯ ಕೂಡ ಹೋಗುತ್ತಿದ್ದನು. ಹೂವಿನಿಂದ ತುಂಬಿದ ಅಲ್ಲಿಯ ಗಿಡಗಂಟಿಗಳನ್ನೂ ಹರಿಯುತ್ತಿದ್ದ ನದಿ-ಹಳ್ಳಗಳನ್ನೂ ಕಂಡು ಆನಂದಪಡುತ್ತಿದ್ದನು. ಗುಡ್ಡಗಾಡಿನಲ್ಲಿಯ ಕಾಡುಮೃಗಗಳನ್ನು ಕಂಡು ಅವನು ಹೆದರುತ್ತಿದ್ದಿಲ್ಲ. ಅವುಗಳನ್ನು ಪ್ರೀತಿಸುತ್ತಿದ್ದನು.

ಒಮ್ಮೆ ವರ್ಧಮಾನನು ಗೆಳೆಯರೊಡನೆ, ಊರಹೊರಗಿನ ಬಯಲಿಗೆ ಆಡಲಿಕ್ಕೆ ಹೋಗಿದ್ದನು. ಅಲ್ಲಿ ಅವನೂ ಅವನ ಗೆಳೆಯರೂ ಒಂದು ಗಿಡವನ್ನು ಏರಿ ಆಡುತ್ತಿದ್ದರು. ಆಗ ಗಿಡದ ಬೊಡ್ಡೆಯ ಹೊದರಿನೊಳಗಿಂದ ಒಂದು ದೊಡ್ಡ ಹಾವು ಹೊರಬಿದ್ದಿತು. ಭುಸ್ಸೆಂದು ಹೆಡೆತೆಗೆದು ಬೊಡ್ಡೆಗೆ ಸುತ್ತು ಹಾಕಿ ಅದು ಮೇಲಕ್ಕೆ ಬರಹತ್ತಿತ್ತು. ಅದನ್ನು ಕಂಡು ಬಾಲಕರೆಲ್ಲರೂ ಬೆದರಿದರು. ತಾವು ಇದ್ದಲ್ಲಿಂದಲೆ ಕೆಳಗೆ ಜಿಗಿದು ಓಡಿಹೋದರು. ಆದರೆ ವರ್ಧಮಾನನು ಹೆದರದೆ, ಆ ಹಾವನ್ನು ಹೆಡೆಯ ಹತ್ತಿರ ಗಟ್ಟಿಯಾಗಿ ಹಿಡಿದು ತೂರಿ ದೂರ ಒಗೆದನು. ಇದನ್ನು ಕೇಳಿ ಅವನ ತಾಯಿ-ತಂದೆಗಳು ಅವನನ್ನು ಬಹಳ ಹೊಗಳಿದರು.

ಮತ್ತೊಮ್ಮೆ ವರ್ಧಮಾನನು ಗೆಳೆಯರೊಂದಿಗೆ ಆಡಲಿಕ್ಕೆ ಹೊರಟಿದ್ದನು. ಆಗ ದಾರಿಯಲ್ಲಿ ಮದ್ದಾನೆಯೊಂದು ಅವರ ಎದುರಿಗೆ ಓಡುತ್ತ ಬಂದಿತು. ಜೊತೆಯ ಹುಡುಗರೆಲ್ಲರೂ ಓಡಿಹೋದರು. ಆದರೆ ವರ್ಧಮಾನನು ತನ್ನ ಸ್ಥಳಬಿಟ್ಟು ಕದಲಲಿಲ್ಲ. ಆ ಆನೆಯ ಸೊಂಡೆಯನ್ನು ಹಿಡಿದು ಏರಿ ಅದರ ಬೆನ್ನ ಮೇಲೆ ಕುಳಿತನು. ಇದನ್ನು ಕಂಡು ಎಲ್ಲರೂ ಅವನನ್ನು ಕೊಂಡಾಡಿದರು. ಅಂದಿನಿಂದ ಅವನನ್ನು ‘ಮಹಾವೀರ‘ ಎಂದು ಕರೆಯಹತ್ತಿದರು.

ಮಹಾವೀರನು ಶೂರನಿದ್ದರೂ ಅವನ ಮನಸ್ಸು ಬಹಳ ಕೋಮಲವಾಗಿತ್ತು. ತಂದೆಯೊಡನೆ ಅವನು ಆಗಾಗ ಬೇಟೆಗೆ ಹೋಗುತ್ತಿದ್ದನು. ಅಡವಿಯಲ್ಲಿ ಮನಬಂದಂತೆ ತಿರುಗಾಡುತ್ತಿದ್ದ ಮೃಗಗಳನ್ನು ನೋಡುತ್ತಿದ್ದನು; ಆನಂದಪಡುತ್ತಿದ್ದನು. “ಪಾಪ! ಈ ಬಡಪ್ರಾಣಿಗಳನ್ನು ಸುಮ್ಮಸುಮ್ಮನೆ ಏಕೆ ಕೊಲ್ಲಬೇಕು?” ಎಂದು ದಯೆಹುಟ್ಟಿ ಬೇಟೆಯ ಆಟವನ್ನು ನಿಲ್ಲಿಸಿ ತಿರುಗಿ ಬರುತ್ತಿದ್ದನು, ಹಾಡುವ ಪಕ್ಷಿಗಳನ್ನಾಗಲಿ ಆಡುವ ಪಶುಗಳನ್ನಾಗಲಿ ಅವನು ಎಂದೂ ಕೊಲ್ಲುತ್ತಿರಲಿಲ್ಲ. ಚಿಕ್ಕಂದಿನಿಂದಲೂ ಮಹಾವೀರನಲ್ಲಿ ಪ್ರಾಣಿ. ದಯೆ, ಮಾನವಪ್ರೀತಿ ಇವು ಮನೆಮಾಡಿಕೊಂಡಿದ್ದುವು.

ಮಹಾವೀರನು ಬೆಳೆದು ದೊಡ್ಡವನಾದನು. ಅವನು ಯಾವಾಗಲೂ ತಾಯಿ-ತಂದೆಗಳ ಆಜ್ಞೆಯನ್ನು ಪಾಲಿಸುವುದರಲ್ಲಿಯೂ ಅವರ ಸೇವೆಯನ್ನು ಮಾಡುವುದರಲ್ಲಿಯೂ ಕಾಲಕಳೆಯುತ್ತಿದ್ದನು. ಅದರಲ್ಲಿಯೇ ಅವನಿಗೆ ಆನಂದವಾಗುತ್ತಿತ್ತು. ಮಗನು ವಯಸ್ಸಿಗೆ ಬಂದುದನ್ನು ಕಂಡು ತಾಯಿ- ತಂದೆಗಳು ಅವನ ಮದುವೆ ಮಾಡಬೇಕೆಂದು ವಿಚಾರ ಮಾಡಿದರು. ಆದರೆ ಮದುವೆ ಮಾಡಿಕೊಳ್ಳಲು ಮಹಾವೀರನ ಮನಸ್ಸು ಒಪ್ಪಲಿಲ್ಲ. ಕಡೆತನಕ ಬ್ರಹ್ಮಚಾರಿಯಾಗಿಯೇ ಇರಬೇಕೆಂದು ಅವನ ಅಪೇಕ್ಷೆ, ಇದು ತಂದೆ-ತಾಯಿಗಳ ಮನಸ್ಸಿಗೆ ಬರಲಿಲ್ಲ. ಮದುವೆಯ ಸಿದ್ಧತೆಯನ್ನು ನಡೆಸಿಯೇ ಬಿಟ್ಟರು. ಸಮರವೀರನೆಂಬ ಅರಸನ ಮಗಳಾದ ಯಶೋಧರೆಯನ್ನು ಗೊತ್ತು ಮಾಡಿ ಮಹಾವೀರನ ಲಗ್ನ ಮಾಡಿದರು. ತಂದೆ-ತಾಯಿಗಳ ಮನಸ್ಸಿಗೆ ನೋವನ್ನು ಉಂಟುಮಾಡಬಾರದೆಂದು ಮಹಾವೀರನು ಕೆಲವು ದಿವಸಗಳವರೆಗೆ ಹೆಂಡತಿಯೊಡನೆ ಸುಖವಾಗಿ ಸಂಸಾರ ಮಾಡಿದನು. ಆಗ ಅವನಿಗೆ ಒಬ್ಬ ಮಗಳು ಹುಟ್ಟಿದಳು. ಅವಳ ಹೆಸರು ಪ್ರಿಯದರ್ಶನ.

ಮುಂದೆ ಕೆಲವು ದಿನಗಳಲ್ಲಿಯೆ ಮಹಾವೀರನ ತಂದೆ-ತಾಯಿಗಳು ತೀರಿಕೊಂಡರು. ಇದರಿಂದ ಅವನಿಗೆ ಒಹಳ ದುಃಖವಾಯಿತು. “ಸಂಸಾರದಲ್ಲಿ ಸುಖಕ್ಕಿಂತ ದುಃಖವೇ ಹೆಚ್ಚಿದೆ” ಎಂಬುದು ತಿಳಿಯಿತು. “ಈ ಲೋಕದಲ್ಲಿ ಯಾರಿಗೂ ದುಃಖವು ತಪ್ಪಿದುದಲ್ಲ. ಹುಟ್ಟಿದವರೆಲ್ಲರೂ ಸಾಯುವವರೆ ಎಂದಮೇಲೆ, ಸುಮ್ಮನೆ ಏಕೆ ಕಾಲಕಳೆಯಬೇಕು? ಆರಣ್ಯಕ್ಕೆ ಹೋಗಿ ತಪಸ್ಸು ಮಾಡಿ ದೇವರನ್ನು ಮೆಚ್ಚಿಸಿ ನಿನಿರ್ವಾಣ ಹೊಂದಬೇಕು” ಎಂದು ಆತನು ವಿಚಾರ ಮಾಡಿದನು. ಅರಮನೆಯ ಯಾವ ಸುಖವಿಲಾಸಗಳೂ ಅವನನ್ನು ತಡೆಯಲಿಲ್ಲ. ಹೆಂಡತಿ-ಮಗಳನ್ನು ಬಿಟ್ಟು ಕಾಡಿಗೆ ಹೋದನು.

ಕಾಡಿನಲ್ಲಿ ಮಹಾವೀರನು, ಅನೇಕ ವರುಷಗಳವರೆಗೆ ತಪಸ್ಸು ಮಾಡಿದನು. ಕೆಲವುದಿನ ಗುಹೆಗಳಲ್ಲಿ ಕುಳಿತನು. ಕೆಲವು ದಿವಸ ದಟ್ಟವಾದ ಕಾಡಿನಲ್ಲಿ ಅಲೆದಾಡಿದನು. ಆಗ ಅವನಿಗೆ ದುಷ್ಟಜನರಿಂದಲೂ ಕಾಡುಮೃಗಗಳಿಂದಲೂ ಎಷ್ಟೋ ತೊಂದರೆಯಾಯಿತು. ಆದರೆ ಮಹಾವೀರನು ಅವುಗಳಿಗೆ ಹೆದರಲಿಲ್ಲ. ಶಾಂತರೀತಿಯಿಂದ ಕುಳಿತು ದೇವರ ಧ್ಯಾನಮಾಡುತ್ತಿದ್ದನು. ಹೀಗೆ ಹನ್ನೆರಡು ವರುಷ ಸತತ ತಪಸ್ಸು ಮಾಡಿ, ಜೃಂಭಿಕಾ ಗ್ರಾಮಕ್ಕೆ ಬಂದನು! ಅದರ ನೆರೆಯಲ್ಲಿ ಹರಿದಿರುವ ‘ಋಜುಪಾಲಿಕಾ’ ನದಿಯದಂಡೆಯ ಮೇಲೆ ಒಂದು ಶಾಲವೃಕ್ಷವಿತ್ತು. ಅದರ ಅಡಿಯ ಬಂಡೆಯೊಂದರ ಮೇಲೆ ಕುಳಿತು ಧ್ಯಾನಮಾಡಹತ್ತಿದನು. ಅಲ್ಲಿ ಅವನಿಗೆ ಹೊಸದೊಂದು ತಿಳಿವಳಿಕೆ ಮೂಡಿತು. ಅಲ್ಲಿಂದ ಹೊರಟು ಮಹಾವೀರನು, ಜನರಿಗೆ ತಾನು ಕಂಡ ತಿಳಿವಳಿಕೆಯ ಉಪದೇಶ ಮಾಡತೊಡಗಿದನು. ಆಗ ಅವನಿಗೆ ನಲ್ವತ್ತೆರಡು ವರುಷಗಳಾಗಿದ್ದುವು.

ಸುಮಾರು ಮೂವತ್ತು ವರುಷಗಳವರೆಗೆ ಎಲ್ಲ ಕಡೆಗೆ ತಿರುಗಾಡಿ ಜೀವ ದಯೆ, ಅಹಿಂಸೆಗಳನ್ನು ಬೋಧಿಸುವ ತನ್ನ ಧರ್ಮವನ್ನು ಪ್ರಸಾರ ಮಾಡಿದನು. ಹೋದ ಹೋದಲ್ಲೆಲ್ಲ ಜನರು ಅವನ ಧರ್ಮವನ್ನು ಸ್ವೀಕರಿಸತೊಡಗಿದರು. ಮಗಧರಾಜ್ಯದ ಬಿಂಬಿಸಾರ, ಅಜಾತಶತ್ರು ಹಾಗು ವೈಶಾಲಿಯ ಅರಸನಾದ ಚೇತಕ ಮುಂತಾದವರು ಈ ಧರ್ಮವನ್ನು ಸ್ವೀಕರಿಸಿ ಮಹಾವೀರನ ಶಿಷ್ಯರಾದರು. ಮಹಾವೀರನನ್ನು ‘ಜಿನ‘ ಎಂದು ಕರೆಯಹತ್ತಿದರು. ಸಂಸ್ಕೃತ ಭಾಷೆಯಲ್ಲಿ ‘ಜಿನ‘ ಎಂದರೆ ಎಲ್ಲವನ್ನು ತಿಳಿದವ ಎಂದು ಅರ್ಥ. ಜಿನನು ಬೋಧಿಸುತ್ತಿದ್ದ ಧರ್ಮವು ಜೈನಧರ್ಮ ಎಂದು ಹೆಸರನ್ನು ಪಡೆಯಿತು. ಜಿನನು ಧರ್ಮಪ್ರಚಾರ ಮಾಡುತ್ತ ಎಪ್ಪತ್ತೆರಡು ವರುಷಗಳವರೆಗೆ ಬಾಳಿ ಕೊನೆಗೆ ಮುಕ್ತಿಯನ್ನು ಹೊಂದಿದನು.

ಮಹಾವೀರನನ್ನು ‘ಜಿನ‘ ಎಂದು ಕರೆಯಹತ್ತಿದರು. ಸಂಸ್ಕೃತ ಭಾಷೆಯಲ್ಲಿ ‘ಜಿನ‘ ಎಂದರೆ ಎಲ್ಲವನ್ನು ತಿಳಿದವ ಎಂದು ಅರ್ಥ. ಜಿನನು ಬೋಧಿಸುತ್ತಿದ್ದ ಧರ್ಮವು ಜೈನಧರ್ಮ ಎಂದು ಹೆಸರನ್ನು ಪಡೆಯಿತು.

ಅಹಿಂಸಾ ಪರಮೋ ಧರ್ಮಃ” ಎಂದರೆ ಹಿಂಸೆ ಮಾಡದಿರುವುದೇ ಸರ್ವ ಶ್ರೇಷ್ಠವಾದ ಧರ್ಮ ಎಂಬುದು ಜೈನಧರ್ಮದ ಮುಖ್ಯ ಮಂತ್ರವು. “ಯಾವನು ಪ್ರಾಣಿಗಳನ್ನು ಪ್ರೀತಿಸುವನೋ ಅವನನ್ನು ದೇವರು ಪ್ರೀತಿಸುತ್ತಾನೆ” ಎಂಬುದು ಜೈನಧರ್ಮದವರ ನಂಬುಗೆ.

“ಶರೀರವು ಪಾಪಮಯವಾಗಿರುವುದರಿಂದ ವ್ರತ ಉಪವಾಸಗಳಿಂದ ಅದನ್ನು ದಂಡಿಸಬೇಕು. ಅದರಿಂದ ಶರೀರ-ಮನಸ್ಸುಗಳು ನಿರ್ಮಲವಾಗುವುವು. ಜಗತ್ತಿನ ಎಲ್ಲ ವಸ್ತುಗಳಲ್ಲಿ ಜೀವವಿದೆ” ಎಂದು ಅವರು ಹೇಳುತ್ತಾರೆ. ಜೈನರಲ್ಲಿ “ಶ್ವೇತಾಂಬರ, ದಿಗಂಬರ” ಎಂದು ಎರಡು ಮುಖ್ಯ ಪಂಗಡಗಳು ಇವೆ, ಉತ್ತರಭಾರತದಲ್ಲಿ ಶ್ವೇತಾಂಬರ ಜೈನರ ಸಂಖ್ಯೆ ಹೆಚ್ಚು. ದಕ್ಷಿಣ ಭಾರತದಲ್ಲಿ ದಿಗಂಬರ ಪಂಗಡಕ್ಕೆ ಸೇರಿದವರೇ ಬಹುಜನರಿರುವರು. ಶ್ರವಣಬೆಳುಗೊಳ, ಕಾರಳ, ಪಾಲಿಠಾಣಾ, ಗಿರಿನಾರಬೆಟ್ಟ ಮತ್ತು ಅಬೂ ಬೆಟ್ಟಗಳು ಜೈನರ ಪವಿತ್ರ ಕ್ಷೇತ್ರಗಳಾಗಿವೆ.

ಐತಿಹಾಸಿಕ ಕತೆಗಳು ಪುಸ್ತಕದಿಂದ ಸಂಗ್ರಹಿಸಿದ ಕತೆ. ಲೇಖಕರು: ಜಿ.ವಿ ಅಂಗಡಿ.

Leave a Reply

Your email address will not be published. Required fields are marked *