ಚಕ್ರವರ್ತಿಯಿಂದ ಶಾಂತಿ ರಾಯಭಾರಿಯವರೆಗೆ : ಅಶೋಕನ ಕತೆ

ಪ್ರೀತಿಯ ಓದುಗರೇ, ನಮ್ಮ ರಾಷ್ಟ್ರದ ಮುದ್ರೆಯನ್ನೂ ರಾಷ್ಟ್ರಧ್ವಜದಲ್ಲಿ ಇರುವ ಚಕ್ರವನ್ನೂ ನೋಡಿರುವಿರಲ್ಲವೆ? ಅವು ಎಲ್ಲಿಯವು, ಅವುಗಳನ್ನು ಯಾರು ಕೆತ್ತಿಸಿದರು ಎಂಬುದು ನಿಮಗೆ ಗೊತ್ತೇ? ಇವು ಸಾರನಾಥದಲ್ಲಿರುವ ಅಶೋಕನ ಸ್ತಂಭದ ಮೇಲೆ ಇವೆ. ಸಾರನಾಥವು ಉತ್ತರಭಾರತದಲ್ಲಿದೆ. ಅಲ್ಲಿ ಇರುವ ಆ ಪುರಾತನಸ್ತಂಭವನ್ನು ಅಶೋಕ ಚಕ್ರವರ್ತಿಯು ನಿಲ್ಲಿಸಿದ್ದಾನೆ.

(ಚಿತ್ರ ಕೃಪೆ)
ಅಶೋಕ ಚಕ್ರವರ್ತಿ ರಾಜ್ಯದ ಆಶೆಯಿಂದ ವೈರಿಜನರನ್ನು ಸಂಹಾರ ಮಾಡಿ ರಕ್ತದ ಕಾಲುವೆ ಹರಿಸಿದ್ದನು. ಮುಂದೆ ಪಶ್ಚಾತ್ತಾಪದಿಂದ ದಯಾವಂತನಾಗಿ ಜಗತ್ತಿಗೆಲ್ಲ ಒಳ್ಳೆಯದನ್ನು ಮಾಡಿ ಹೆಸರಾದನು. ಅಂತಹ ದಯಾಳು ಸಮ್ರಾಟನ ಚರಿತ್ರೆ ಗೊತ್ತಿದೆಯೆ ನಿಮಗೆ?
ಮೌರ್ಯವಂಶದ ಚಂದ್ರಗುಪ್ತನ ತರುವಾಯ, ಅವನ ಮಗ ಬಿಂದುಸಾರನು ಅರಸನಾದನು. ಅವನಿಗೆ ಸುಷೀಮ, ಅಶೋಕ, ವೀತಶೋಕ ಎಂದು ಮೂವರು ಮಕ್ಕಳಿದ್ದರು. ಅವರಲ್ಲಿ ಎರಡನೆಯವನಾದ ಅಶೋಕನು ಬಲು ಬುದ್ಧಿವಂತ ಮತ್ತು ಮಹಾಪರಾಕ್ರಮಿ. ಹಿರಿಯವನಾದ ಸುಷೀಮನು ಮಂದಬುದ್ಧಿಯವ ಮತ್ತು ಹೇಡಿ. ಆದುದರಿಂದ ಬಿಂದುಸಾರನು ಅಶೋಕನನ್ನು ಬಹಳವಾಗಿ ಪ್ರೀತಿಸುತ್ತಿದ್ದನು. ಚಿಕ್ಕವನಿದ್ದಾಗ ಅಶೋಕನಿಗೆ ಅರಸು ಮಕ್ಕಳಿಗೆ ಬೇಕಾಗುವ ಎಲ್ಲ ವಿದ್ಯೆ-ಬುದ್ಧಿಗಳನ್ನೂ ಕಲಿಸಿದನು. ರಾಜ್ಯವಾಳುವ ಕೌಶಲ್ಯವನ್ನೂ ತಿಳಿಸಿಕೊಟ್ಟನು.
ಬಿಂದುಸಾರನ ಮರಣಸಮಯದಲ್ಲಿ ಅಶೋಕನು ಉಜ್ಜಯಿನಿಯಲ್ಲಿ ಇದ್ದನು. ಅವನು ತಂದೆಯ ಸಾವಿನ ಸುದ್ದಿಯನ್ನು ಕೇಳಿ ಪಾಟಲೀಪುತ್ರಕ್ಕೆ ಬಂದನು. ರಾಧಾಗುಪ್ತನೆಂಬ ಮಂತ್ರಿಯ ಸಹಾಯದಿಂದ, ಕ್ರಿ. ಪೂ. 268 ರಲ್ಲಿ, ಪಾಟಲೀಪುತ್ರದ ಸಿಂಹಾಸನದ ಮೇಲೆ ಕುಳಿತನು. ಪಟ್ಟಕ್ಕೆ ತಾನು ಹಕ್ಕುದಾರನೆಂದು ಸುಷೀಮನು ಕೆಲವು ಸರದಾರರನ್ನು ಕೂಡಿಕೊಂಡು ಬಂಡೆಬ್ಬಿಸಿದನು. ಆಗ ಅಶೋಕನು ಸುಷೀಮನನ್ನೂ ಎಲ್ಲ ವಿರೋಧಿಗಳನ್ನೂ ನಾಶಮಾಡಿ ಬಂಡನ್ನು ಮುರಿದನು.
ಅಶೋಕನು ಅರಸನಾದ ಮೇಲೆ, ಹೊಸ ಪ್ರದೇಶಗಳನ್ನು ಗೆದ್ದು ತನ್ನ ರಾಜ್ಯವನ್ನು ಬೆಳೆಸಬೇಕೆಂದು ಮನಸ್ಸು ಮಾಡಿದನು. ಉತ್ತರ ಭಾರತವನ್ನೆಲ್ಲ ಅವನ ಅಜ್ಜನಾದ ಚಂದ್ರಗುಪ್ತನು ಗೆದ್ದಿದ್ದನು; ದಕ್ಷಿಣ ಭಾರತವನ್ನು ತಂದೆಯಾದ ಬಿಂದುಸಾರನು ಗೆದ್ದಿದ್ದನು. ಇನ್ನು ಉಳಿದುದೆಂದರೆ ಕಳಿಂಗರಾಜ್ಯವು ಒಂದೇ, ಆದುದರಿಂದ ಅದನ್ನು ಗೆಲ್ಲಬೇಕೆಂದು ಅಶೋಕನು ನಿಶ್ಚಯಿಸಿದನು. ದೊಡ್ಡ ದಂಡಿನೊಡನೆ ಆ ದೇಶದ ಮೇಲೆ ದಾಳಿಮಾಡಿದನು.
ಕಳಿಂಗ, ಪೂರ್ವ-ಮಧ್ಯ ಭಾರತದ ಪ್ರಾಚೀನ ಪ್ರಾದೇಶಿಕ ಉಪವಿಭಾಗ. ಇದು ಇಂದಿನ ಉತ್ತರ ತೆಲಂಗಾಣ, ಈಶಾನ್ಯ ಆಂಧ್ರಪ್ರದೇಶ, ಒಡಿಶಾದ ಹೆಚ್ಚಿನ ಭಾಗ ಮತ್ತು ಮಧ್ಯಪ್ರದೇಶ ರಾಜ್ಯಗಳಿಗೆ ಅನುರೂಪವಾಗಿದೆ.
ಕಳಿಂಗರಾಜ್ಯವು ಚಿಕ್ಕದು; ಆದರೆ ಅಲ್ಲಿಯ ಜನರು ಬಹಳ ಶೂರರು. ಘನವಂತರು ಹಾಗೂ ವಿದ್ಯಾವಂತರು. ತಮ್ಮ ಸ್ವಾತಂತ್ರ್ಯವನ್ನು ಕಾಯ್ದು ಕೊಳ್ಳಲು ಅವರು ಎಷ್ಟು ಕಷ್ಟಗಳನ್ನಾದರೂ ಸಹಿಸಲು ಸಿದ್ಧರಾಗಿದ್ದರು. ಆದುದರಿಂದ ಅವರು ಹಟದಿಂದಲೂ ಧೈರ್ಯದಿಂದಲೂ ಆಶೋಕನ ಸೈನ್ಯವನ್ನು ಎದುರಿಸಿದರು. ಬಹಳ ಸಾಹಸದಿಂದ ಕಾದಿದರು. ಆ ಮಹಾಯುದ್ಧದಲ್ಲಿ ಎರಡೂ ಕಡೆಗಳಲ್ಲಿಯೂ ಲೆಕ್ಕವಿಲ್ಲದಷ್ಟು ಸೈನಿಕರು ಸತ್ತರು. ರಕ್ತದ ಕಾಲುವೆಗಳು ಹರಿದುವು. ಕೊನೆಗೆ ಅಶೋಕನಿಗೆ ಜಯವಾಯಿತು.
ಜಯದ ಉಬ್ಬಿನಲ್ಲಿ ಅಶೋಕನು ರಣಾಂಗಣದಲ್ಲಿ ತಿರುಗಾಡುತ್ತಿದ್ದನು. ಆಗ ಅಲ್ಲಿ ಬಿದ್ದಿರುವ ಲಕ್ಷಾಂತರ ಹೆಣಗಳನ್ನು ನೋಡಿದನು; ಗಾಯಗೊಂಡು ಬಿದ್ದ ಸೈನಿಕರು ನರಳುವುದನ್ನೂ ಕೇಳಿದನು. ಹರಿಯುತ್ತಿರುವ ರಕ್ತವನ್ನು ಕಂಡನು. ಅದರಿಂದ ಅಶೋಕನ ಮನಸ್ಸಿಗೆ ಬಹಳೇ ನೋವಾಯಿತು. ಅವನು – “ಅಯ್ಯೋ! ನಾನು ಎಂತಹ ಅನ್ಯಾಯ ಮಾಡಿದೆನು! ರಾಜ್ಯದ ಆಶೆಯಿಂದ ಎಷ್ಟು ಜನರನ್ನು ಕೊಂದೆನಲ್ಲ! ಎಷ್ಟು ಮನೆಗಳು ನನ್ನಿಂದ ನೆಲಸಮವಾದುವು! ಎಷ್ಟು ಜನ ಸ್ತ್ರೀಯರು ಹಾಗೂ ಬಾಲಕರು ಅನಾಥರಾದರು! ಇವರೆಲ್ಲರನ್ನು ದುಃಖದಲ್ಲಿ ಮುಳುಗಿಸಿ ನನಗೆ ಸುಖಸಿಗುವುದೇ? ಛೇ, ಛೇ! ನನಗೆ ಈ ಯುದ್ಧ ಬೇಡ, ಯುದ್ಧ ಮಾಡಬೇಕಾಗುವಂತಹ ರಾಜ್ಯ ಬೇಡ!” ಎಂದು ದುಃಖಿಸಿದನು.
ಅಂದಿನಿಂದ ಅಶೋಕನ ಸ್ವಭಾವವು ಸಂಪೂರ್ಣ ಬದಲಾಯಿತು. ಯುದ್ಧದಿಂದ ಸಿಗುವ ಗೆಲವು ಗೆಲವೇ ಅಲ್ಲ. ಪ್ರೀತಿಯಿಂದ ದೊರೆಯುವ ಗೆಲವು ನಿಜವಾದುದು. ಅದರಿಂದಲೇ ಜಗತ್ತಿಗೆ ಹಿತವಾಗುವುದು!’ ಎಂಬ ಮಾತನ್ನು ಅವನು ಪೂರ್ತಿಯಾಗಿ ಮನಗಂಡನು. ಕ್ರೂರತನವನ್ನು ಬಿಟ್ಟುಬಿಟ್ಟನು. ‘ನಾನು ಜೀವಿಸಿರುವವರೆಗೆ ಇನ್ನೆಂದೂ ಯುದ್ಧ ಮಾಡುವುದಿಲ್ಲ’ ಎಂದು ಪ್ರತಿಜ್ಞೆಯನ್ನು ಮಾಡಿದನು. ಇನ್ನು ಮೇಲೆ ತನ್ನ ಕೈಲಾದ ಮಟ್ಟಿಗೆ ಪ್ರಜೆಗಳ ಹಿತಮಾಡಬೇಕೆಂದು ನಿಶ್ಚಯ ಮಾಡಿದನು. ಅದೇ ಸಮಯಕ್ಕೆ ಸರಿಯಾಗಿ ಅವನಿಗೆ ಉಪಗುಪ್ತನೆಂಬ ಬೌದ್ಧ ಸಂನ್ಯಾಸಿಯ ದರ್ಶನವಾಯಿತು. ಅಶೋಕನಿಗೆ ಬೌದ್ಧಧರ್ಮವನ್ನು ಉಪದೇಶಮಾಡಿದನು. ಹಿಂಸೆ ಮಾಡಬಾರದು ಎಂಬ ಬೌದ್ಧಧರ್ಮದ ತತ್ತ್ವವು ಅಶೋಕನ ಮನಸ್ಸನ್ನು ಹಿಡಿದುಬಿಟ್ಟಿತು. ಅವನು ಬೌದ್ಧ ಧರ್ಮವನ್ನು ಸ್ವೀಕರಿಸಿದನು. ಅಂದಿನಿಂದ ‘ಪ್ರಿಯದರ್ಶಿ‘ ಎಂಬ ಹೆಸರನ್ನಿಟ್ಟುಕೊಂಡು ರಾಜ್ಯವಾಳಲು ಪ್ರಾರಂಭಿಸಿದನು.
‘ಪ್ರಿಯದರ್ಶಿ‘ ಎಂದರೆ ಎಲ್ಲರಿಗೂ ಒಳ್ಳೆಯದನ್ನು ಮಾಡುವವ ಎಂದು ಅರ್ಥ. ಅಶೋಕನು ನಿಜವಾಗಿ ಪ್ರಿಯದರ್ಶಿಯಾದನು. ಅವನು ಮಾಂಸ ತಿನ್ನುವುದನ್ನು ಬಿಟ್ಟುಬಿಟ್ಟನು. ಬೇಟೆ ಆಡುವುದನ್ನು ನಿಲ್ಲಿಸಿದನು. ತನ್ನ ಸಾಮ್ರಾಜ್ಯದಲ್ಲೆಲ್ಲ ಯಾರೂ ಪ್ರಾಣಿಗಳನ್ನು ಕೊಲ್ಲಬಾರದೆಂದು ಕಟ್ಟಪ್ಪಣೆ ಮಾಡಿದನು. ಕಾಡುಗಳಿಗೆ ಬೆಂಕಿ ಇಡುವುದು ಅಪರಾಧವೆಂದು ಸಾರಿದನು. ಜನರಿಗೂ ಪಶುಗಳಿಗೂ ಉಪಯೋಗವಾಗಲೆಂದು ಅಲ್ಲಲ್ಲಿ ಔಷಧಾಲಯಗಳನ್ನು ಪ್ರಾರಂಭಿಸಿದನು. ಔಪಧಕ್ಕೆ ಉಪಯೋಗವಾಗುವ ಬೇರೆ ಬೇರೆ ವನಸ್ಪತಿಗಳನ್ನು ಅಲ್ಲಲ್ಲಿಯ ಗುಡ್ಡ ಬೆಟ್ಟಗಳಲ್ಲಿ ಹಚ್ಚಿಸಿದನು. ಕೆರೆ-ಬಾವಿ ಗಳನ್ನು ತೆಗೆಸಿದನು. ಅರವಟ್ಟಿಗೆ – ಅನ್ನಛತ್ರಗಳನ್ನು ಇಡಿಸಿದನು. ಜನರಿಗೆ ವಿದ್ಯೆ-ಬುದ್ಧಿಗಳು ದೊರೆಯಬೇಕೆಂದು ಅಲ್ಲಲ್ಲಿ ಪಾಠಶಾಲೆಗಳನ್ನು ಪ್ರಾರಂಭಿಸಿದನು. ಆತನ ಕಾಲದಲ್ಲಿ ನಲಂದ, ತಕ್ಷಶಿಲೆ ಮತ್ತು ಉಜ್ಜಯನಿ ವಿಶ್ವವಿದ್ಯಾಲಯಗಳು ಬಹಳ ಪ್ರಸಿದ್ಧಿಯನ್ನು ಪಡೆದಿದ್ದುವು. ಅವುಗಳ ವೆಚ್ಚಕ್ಕಾಗಿ ಅಶೋಕನು ಹೇರಳ ಹಣವನ್ನು ಕೊಡುತ್ತಿದ್ದನು.
ಅಶೋಕನ ಆಡಳಿತದ ಕಾಲದಲ್ಲಿ ಮುಂದೆ ಎಂದೂ ಯುದ್ಧಗಳಾಗಲಿಲ್ಲ. ಜನರು ವ್ಯಾಪಾರ-ಒಕ್ಕಲುಗಳನ್ನು ಮಾಡಿಕೊಂಡು ಸುಖವಾಗಿದ್ದರು. ಎಲ್ಲ ಕಡೆಗೂ ಕಲೆ-ಕೈಗಾರಿಕೆಗಳು ತಲೆಯೆತ್ತಿ ನಿಂತವು. ಸ್ವತಃ ಅಶೋಕನು “ತಾಯಿ-ತಂದೆಗಳಲ್ಲಿ ಭಕ್ತಿಯಿಡಬೇಕು. ಸತ್ಯ ಮಾತಾಡಬೇಕು. ಭೂತದಯೆ ಇರಬೇಕು” ಎಂದು ಮುಂತಾದ ಎಷ್ಟೋ ನೀತಿಯ ಮಾತುಗಳನ್ನು ಕಲ್ಲುಗಳ ಮೇಲೆ ಕೆತ್ತಿಸಿ, ರಾಜ್ಯದ ಎಲ್ಲ ಕಡೆಯಲ್ಲಿಯೂ ನಿಲ್ಲಿಸಿದ್ದಾನೆ. ಅವು ಭಾರತದ ಅನೇಕ ಭಾಗಗಳಲ್ಲಿ ಈಗಲೂ ನೋಡಲು ಸಿಗುತ್ತವೆ. ಅವೆಲ್ಲ ಅಶೋಕನ ಸ್ತಂಭಗಳೆಂದು ಪ್ರಸಿದ್ಧಿಯನ್ನು ಪಡೆದಿರುತ್ತವೆ.
ಬೌದ್ಧಧರ್ಮವನ್ನು ಪ್ರಚಾರಮಾಡಲು ಆಶೋಕನು ತನ್ನ ಆಯುಷ್ಯದ ಬಹುಭಾಗವನ್ನು ಕಳೆದನು. ಮೇಲಿಂದ ಮೇಲೆ ಅಲ್ಲಲ್ಲಿ ಧರ್ಮಸಭೆಗಳನ್ನು ಕೂಡಿಸುತ್ತಿದ್ದನು. ಅಲ್ಲಿ ಧರ್ಮದ ವಿಷಯದಲ್ಲಿ ಚರ್ಚೆ ನಡೆಯುವಂತೆ ಏರ್ಪಡಿಸುತ್ತಿದ್ದನು. ಧರ್ಮಪ್ರಚಾರಕ್ಕಾಗಿ ಸಾವಿರಾರು ಭಿಕ್ಷುಗಳನ್ನು ಗ್ರೀಸ್, ಇಜಿಪ್ತ, ಸಿಲೋನ್, ಬ್ರಹ್ಮದೇಶ ಮತ್ತು ಚೀನ ದೇಶಗಳಿಗೆ ಕಳುಹಿದ್ದನು. ಇವನ ಮಗನಾದ ಕುನಾಲನೂ, ತಂಗಿಯಾದ ಸಂಘಮಿತ್ರೆಯೂ ಧರ್ಮಪ್ರಸಾರಕ್ಕಾಗಿ ಪರದೇಶಗಳಿಗೆ ಹೋಗಿದ್ದರು. ಅಶೋಕನು ಬಹಳ ಹಣವನ್ನು ವೆಚ್ಚ ಮಾಡಿ ಬೇರೆ ಬೇರೆ ಸ್ತೂಪ-ಚೈತ್ಯಾಲಯ-ವಿಹಾರಗಳನ್ನು ಕಟ್ಟಿಸಿದನು; ಅನೇಕ ಶಿಲಾಲೇಖಗಳನ್ನು(ಶಾಸನ) ಬರೆಸಿದನು. ಅಶೋಕನ ಕಾಲಕ್ಕೆ ಮಗಧರಾಜ್ಯವು ವೈಭವದ ಶಿಖರಕ್ಕೆ ಮುಟ್ಟಿತ್ತು. ಇವನಂತಹ ಘನವಂತನೂ, ದಯಾಳುವೂ ಆದ ಅರಸನು ಎಂದೂ ಆಗಿಲ್ಲವೆಂದು ಹೇಳುತ್ತಾರೆ.
ಐತಿಹಾಸಿಕ ಕತೆಗಳು ಪುಸ್ತಕದಿಂದ ಸಂಗ್ರಹಿಸಿದ ಕತೆ. ಲೇಖಕರು: ಜಿ.ವಿ ಅಂಗಡಿ.