ಮುಹಮ್ಮದ್ ಪೈಗಂಬರ್ : ಅರೇಬಿಯಾದ ಒಬ್ಬ ಅನಾಥ ಹುಡುಗ ಮಹಾನ್ ಪ್ರವಾದಿಯಾದ ಕತೆ

ಮಹಮ್ಮದ ಪೈಗಂಬರರು ಪ್ರವಚನ ಕೊಡುತ್ತಿರುವುದು

ನಮ್ಮ ದೇಶದ ಪಶ್ಚಿಮಕ್ಕೆ ಅರಬೀಸಮುದ್ರವು ಇರುವುದು. ಅದರ ಆಚೆಯ ದಂಡೆಯಲ್ಲಿ ಅರಬಸ್ತಾನವೆಂಬ ದೇಶವಿದೆ. ಸುಮಾರು ಹದಿಮೂರು ನೂರು ವರುಷಗಳ ಹಿಂದೆ, ಅಲ್ಲಿಯ ಜನರ ಪರಿಸ್ಥಿತಿ ನೆಟ್ಟಗಿರಲಿಲ್ಲ. ಅವರಲ್ಲಿ ಎಷ್ಟೆಷ್ಟೋ ಸಣ್ಣ ಸಣ್ಣ ಪಂಗಡಗಳಿದ್ದುವು. ಬಲಿಷ್ಠನಾದವನೇ ಅಲ್ಲಿ ಮುಂದಾಳು, ಹಣಗಾರರಾದ ಕೆಲವು ಜನರು, ಹಣವಿಲ್ಲದ ಬಹುಜನ ಬಡವರನ್ನು ತಮ್ಮ ಮನಸ್ಸಿಗೆ ಬಂದಂತೆ ನಡೆಸಿಕೊಳ್ಳುತ್ತಿದ್ದರು. ಜನರಲ್ಲಿ ಮೂಢ ನಂಬಿಕೆಗಳೂ ಕೆಟ್ಟರೂಢಿಗಳೂ ನೆಲೆಗೊಂಡಿದ್ದು ವು. ಮೂರ್ತಿ ಪೂಜೆಯು ಎಲ್ಲ ಕಡೆಗೂ ನಡೆಯುತ್ತಿತ್ತು. ಒಂದೇ ಮಕ್ಕಾ ಪಟ್ಟಣದೊಳಗಿನ “ಕಾಬಾ” ಎಂಬಲ್ಲಿ, 360ರಷ್ಟು ಬೇರೆಬೇರೆ ಮೂರ್ತಿಗಳಿದ್ದುವು. ಮಕ್ಕಾಪಟ್ಟಣ ಅರಬರ ಪವಿತ್ರ ಕ್ಷೇತ್ರವಾಗಿತ್ತು. ಖುರೈಷ್ ಎಂಬ ವಂಶದವರು ಅಲ್ಲಿಯ ಮುಖ್ಯ ಪೂಜಾರಿಗಳಾಗಿದ್ದರು.

ಖುರೈಷ್ ಪಂಗಡದ ಮುಖ್ಯಸ್ಥ ಅಬ್ದುಲ್ ಎಂಬವ. ಅವನು ಮಕ್ಕಾ ಪಟ್ಟಣದ ದೇವಾಲಯದ ಆಡಳಿತವನ್ನು ನೋಡಿಕೊಳ್ಳುತ್ತಿದ್ದ; ಮತ್ತು ವ್ಯಾಪಾರವನ್ನೂ ಮಾಡುತ್ತಿದ್ದ. ಅವನಿಗೆ ‘ಅಮೀನಾ’ ಎಂಬ ಹೆಂಡತಿ ಇದ್ದಳು. ಈ ಗಂಡ-ಹೆಂಡಿರಿಗೆ ಕ್ರಿ. ಶ. 570ರಲ್ಲಿ ಒಬ್ಬ ಮಗನು ಹುಟ್ಟಿದನು. ಅವನಿಗೆ ಮಹಮ್ಮದನೆಂದು ಹೆಸರಿಟ್ಟರು. ಮಗನು ಹುಟ್ಟುವ ಎರಡು-ಮೂರು ತಿಂಗಳ ಪೂರ್ವದಲ್ಲಿಯೇ, ತಂದೆ ಅಬ್ದುಲ್ಲಾ ತೀರಿಕೊಂಡಿದ್ದನು; ಆರು ವರುಷದವನಾಗುವುದರೊಳಗಾಗಿಯೆ ಮಹಮ್ಮದನ ತಾಯಿಯೂ ತೀರಿಕೊಂಡಳು. ಮುಂದೆ ಬಾಲಕ ಮಹಮ್ಮದನನ್ನು, ಅವನ ಕಕ್ಕನಾದ ಅಬೂತಾಲೀಬನು ಜೋಕೆಮಾಡತೊಡಗಿದನು.

ಸಣ್ಣವನಿದ್ದಾಗ ಮಹಮ್ಮದನು, ಚಿಕ್ಕಪ್ಪನ ಕುರಿಗಳನ್ನು ಕಾಯಲು ಹೋಗುತ್ತಿದ್ದನು. ಕಾಡಿನಲ್ಲಿ ಒಬ್ಬೊಂಟಿಗನಾಗಿ ತಿರುಗಾಡಬೇಕಾಗುತ್ತಿತ್ತು; ಅಲ್ಲಿ ಅವನಿಗೆ ದೇವರ ಬಗೆಗೂ ಜಗತ್ತಿನ ಬಗೆಗೂ ವಿಚಾರಗಳು ಬರತೊಡಗಿದುವು. ಕುರಿಗಳು ಮೇಯುತ್ತಿರುವಾಗ, ಅವನು ಒಂದು ಕಡೆಗೆ ಕುಳಿತು ದೇವರ ಧ್ಯಾನಮಾಡುತ್ತಿದ್ದನು. ಪ್ರತಿದಿನವೂ ಎಷ್ಟೋ ಕಾಲವನ್ನು ದೇವರ ಚಿಂತನೆಯಲ್ಲಿ ಕಳೆಯುತ್ತಿದ್ದನು. ಮುಂದೆ ಪ್ರಾಯಕ್ಕೆ ಬರಲು ಅವನ ಕಕ್ಕನು ಕುರಿಕಾಯುವುದನ್ನು ಬಿಡಿಸಿ ಅವನನ್ನು ವ್ಯಾಪಾರಕ್ಕೆ ಹಚ್ಚಿದನು. ಆಗ ಮಹಮ್ಮದನು, ಸರಕುಗಳನ್ನು ಮಾರಲು ದೂರ-ದೂರದ ದೇಶಗಳಿಗೆ ಹೋಗುತಿದ್ದನು! ಸತ್ಯ-ಪ್ರಾಮಾಣಿಕತೆ ವಿಶ್ವಾಸಗಳ ಮೂಲಕ ಅವನ ವ್ಯಾಪಾರವು ಬೆಳೆಯಿತು.

ಮಕ್ಕಾಪಟ್ಟಣದಲ್ಲಿ ‘ಖುದೇಜಾಬೀಬಿ’ ಎಂಬ ಒಬ್ಬ ಶ್ರೀಮಂತ ಹೆಣ್ಣುಮಗಳು ಇದ್ದಳು. ಅವಳು ದೊಡ್ಡ ವ್ಯಾಪಾರವನ್ನು ಇಟ್ಟಿದ್ದಳು. ಮಹಮ್ಮದನ ಒಳ್ಳೆಯ ಗುಣಗಳನ್ನು ಕಂಡು, ಅವಳು ಅವನನ್ನು ತನ್ನ ಮುಖ್ಯ ಗುಮಾಸ್ತನನ್ನಾಗಿ ನೇಮಿಸಿದಳು. ಮುಂದೆ ಅವಳೇ, ಮಹಮ್ಮದನ ಪ್ರಾಮಾಣಿಕತನಕ್ಕೂ ಚೆಲುವಿಕೆಗೂ ಮನಸೋತು ಅವನನ್ನು ಮದುವೆಯಾದಳು. ಆಗ ಮಹಮ್ಮದನಿಗೆ 25 ವರುಷದ ವಯಸ್ಸು, ಖುದೇಜಳಿಗೆ 40 ಮರುಪದ ವಯಸ್ಸು.

ಖುದೇಜಳನ್ನು ಲಗ್ನವಾದುದರಿಂದ ಮಹಮ್ಮದನು ದೊಡ್ಡ ಐಶ್ವರ್ಯವಂತನಾದನು. ಆದರೆ ಅವನು ಆ ಐಶ್ವರ್ಯವನ್ನು ತನ್ನ ಸುಖಭೋಗಗಳಿಗೆ ಬಳಸಲಿಲ್ಲ. ಒಡಬಗ್ಗರಿಗೆ ಸಹಾಯ ಮಾಡುವುದರಲ್ಲಿ ವೆಚ್ಚ ಮಾಡಹತ್ತಿದನು. ಇದರಿಂದ ಮಹಮ್ಮದನ ಕೀರ್ತಿ ಎಲ್ಲ ಕಡೆಗೂ ಹಬ್ಬಿತು.

ಬಿಡುವು ದೊರೆತಾಗಲೆಲ್ಲ ಮಹಮ್ಮದನು ಅಡವಿಗೆ ಹೋಗುತ್ತಿದ್ದನು. ಅಲ್ಲಿ ಒಬ್ಬನೇ ಕುಳಿತು ದೇವರ ಧ್ಯಾನ ಮಾಡುತ್ತಿದ್ದನು. ಮಕ್ಕಾದ ಬಳಿಯ ಬೆಟ್ಟದಲ್ಲಿ ಇರುವ ‘ಹಿರಾ’ ಎಂಬ ಗುಹೆಯಲ್ಲಿ ಹತ್ತು ದಿನಗಳವರೆಗೆ ಅನ್ನ-ನೀರುಗಳಿಲ್ಲದೆ ಕುಳಿತು ದೇವರ ಧ್ಯಾನದಲ್ಲಿ ಮಗ್ನನಾಗುತ್ತಿದ್ದನು. ಜಗತ್ತನ್ನು ಹುಟ್ಟಿಸಿ ಕಾಯುವ ದೇವರು ಒಬ್ಬನೇ ಇರುವನೆಂದು ಅವನ ಮನವರಿಕೆಯಾಗಿತ್ತು. ಮಹಮ್ಮದನ ಒಬ್ಬನೇ ದೇವನೆಂದರೆ ಅಲ್ಲಾ. ಅವನ ಹೊರತು ಇನ್ನಾವ ದೇವರೂ ಇಲ್ಲವೆಂದು ಅವನು ನಂಬಿದ್ದನು. ಜನರು ಒಬ್ಬನೇ ಒಬ್ಬ ದೇವನನ್ನು ಪೂಜಿಸದೆ ‘ಕಾಬಾ’ದಲ್ಲಿಯ ಎಣಿಕೆ ಇಲ್ಲದಷ್ಟು ಮೂರ್ತಿಗಳನ್ನು ಪೂಜಿಸುವುದನ್ನು ನೋಡಿ ಅವನು ವ್ಯಸನಪಡುತ್ತಿದ್ದನು.

ಅವನು ಒಂದು ದಿನ ಹಿರಾ ಗುಹೆಯಲ್ಲಿ ಕುಳಿತು ದೇವರ ಧ್ಯಾನ ಮಾಡುವಾಗ ದೇವದೂತನು ಪ್ರತ್ಯಕ್ಷನಾಗಿ – “ಮಹಮ್ಮದ, ನೀನು ದೇವರ ಸೇವಕ ನೀನೇ ಪೈಗಂಬರ! ಒಬ್ಬನೇ ದೇವರನ್ನು ಎಲ್ಲರೂ ಆರಾಧಿಸುವಂತೆ ಬೋಧಿಸು!” ಎಂದು ಹೇಳಿ ಮಾಯವಾದನು. ಮಹಮ್ಮದನಿಗೆ ಸಂತೋಷವಾಯಿತು. ಅಲ್ಲಿಂದ ಎದ್ದು ಅವನು ಮನೆಗೆ ಬಂದನು. ಹೆಂಡತಿಗೆ ಹೇಳಿದನು. ಆಕೆಗೂ ಬಹಳ ಸಂತೋಷವಾಯಿತು. ಅವಳು ಪತಿಯ ಉಪದೇಶವನ್ನು ಕೇಳಿ ಅವನ ಮತವನ್ನು ಸ್ವೀಕರಿಸಿದಳು. ಬಳಿಕ ಮಹಮ್ಮದನು ಮಕ್ಕಾ ಪಟ್ಟಣದಲ್ಲಿಯ ಅರಬರಿಗೆ ತನ್ನ ಮತವನ್ನು ಉಪದೇಶ ಮಾಡತೊಡಗಿದನು.

ಮೊದಲು ಹಜರತ್ ಅಲಿ, ಹಜರತ್ ಅಬೂಬಕರ್ ಎಂಬುವರು ಮಹಮ್ಮದನ ಶಿಷ್ಯರಾದರು. ಆದರೆ ಅನೇಕರು ಅವನ ಮತಕ್ಕೆ ವಿರೋಧಿಗಳಾಗಿ ನಿಂತರು. ಪರಿಪರಿಯಿಂದ ಮಹಮ್ಮದನಿಗೆ ತೊಂದರೆ ಕೊಡಹತ್ತಿದರು. ಖುರೈಷ್ ಮನೆತನದವರಂತೂ ಆತನ ಮೇಲೆ ಬಹಳ ಸಿಟ್ಟಾದರು. ‘ಇವನು ನಮ್ಮ ಧರ್ಮವನ್ನು ಕೆಡಿಸುವನು’ ಎಂದು ದೂರಹತ್ತಿದರು. ಕೆಲವರು ಮಹಮ್ಮದನ ಶಿಷ್ಯರನ್ನು ಹೊಡೆದರು. ಆತನ ಕಕ್ಕನಿಂದ ಹೇಳಿಸಿದರು; ಆದರೂ ಅವನು ಕೇಳಲಿಲ್ಲ. ಮುಂದೆ ಕೆಲವು ದಿವಸಗಳಲ್ಲಿ ಅವನ ಹೆಂಡತಿ ಹಾಗು ಚಿಕ್ಕಪ್ಪ ಇಬ್ಬರೂ ಸತ್ತು ಹೋದರು. ಮಕ್ಕಾದಲ್ಲಿಯ ಜನರು ಅವನಿಗೆ ಬಹಳ ತೊಂದರೆ ಕೊಡಹತ್ತಿದರು. ಆಗ ಮಹಮ್ಮದನು ಮಕ್ಕಾ ಬಿಟ್ಟು ಮದಿನಾ ಪಟ್ಟಣಕ್ಕೆ ಹೋದನು. ಅಲ್ಲಿ ತನ್ನ ಉಪದೇಶವನ್ನು ಪ್ರಾರಂಭಿಸಿದನು. ಮೊದಮೊದಲು ಅಲ್ಲಿಯ ಜನರೂ ಅವನನ್ನು ಹಳಿದರು. ಆದರೆ ಬರುವ ಬರುತ ಅವನ ಧೈಯ್ಯ-ತಾಳ್ಮೆ ಸೇವಾಬುದ್ಧಿಗಳನ್ನು ಕಂಡು, ಅವನ ಮತಕ್ಕೆ ಸೇರಿದರು.

ಮಕ್ಕಾದ ಜನರು ಮಹಮ್ಮದನನ್ನು ಅಲ್ಲಿಯೂ ಸುಮ್ಮನೆ ಬಿಡಲಿಲ್ಲ. ಅವನನ್ನು ಕೊಲ್ಲಬೇಕೆಂದು ದೊಡ್ಡ ದಂಡಿನೊಡನೆ ಮದಿನಾ ಪಟ್ಟಣವನ್ನು ಮುತ್ತಿದರು. ಆದರೆ ಮಹಮ್ಮದನು ಧೈರ್ಯ ಬಿಡಲಿಲ್ಲ. ಪ್ರಾಣರಕ್ಷಣೆಗಾಗಿ ತಾನೂ ದಂಡುಕೂಡಿಸಿದ. ವೈರಿಗಳನ್ನೆಲ್ಲ ಹೊಡೆದೋಡಿಸಿದ. ಬಳಿಕ ಅವರು ಮತ್ತೊಂದು ಸಲ ಇವನ ಮೇಲೆ ದಂಡೆತ್ತಿ ಬಂದರು. ಆಗ ಮಹಮ್ಮದನ ಅನುಯಾಯಿಗಳ ಸಂಖ್ಯೆ ಮೊದಲಿಗಿಂತ ಎರಡು ಮೂರು ಪಾಲು ಹೆಚ್ಚಿತ್ತು. ಅವರೆಲ್ಲರ ಮುಂದೆ ವಿರೋಧಿಗಳ ಆಟ ನಡೆಯಲಿಲ್ಲ. ಕೊನೆಗೆ ಅವರು ಸೋತು ಮಹಮ್ಮದನಿಗೆ ಶರಣಾಗತರಾದರು; ಅವನ ಹೊಸಧರ್ಮವನ್ನು ತಾವೂ ಸ್ವೀಕರಿಸಿದರು. ಎಲ್ಲರೂ ಕೂಡಿಕೊಂಡು ಮಹಮ್ಮದನನ್ನು ವೈಭವದಿಂದ ಮಕ್ಕಾ ಪಟ್ಟಣಕ್ಕೆ ಕರೆದುಕೊಂಡು ಹೋದರು. ಅಲ್ಲಿ ಎಲ್ಲ ಜನರೂ ಅವನ ಉಪದೇಶವನ್ನು ಕೇಳಿದರು. ‘ಕಾಬಾ’ದಲ್ಲಿಯ ಮೂರ್ತಿಗಳನ್ನು ಕಿತ್ತೊಗೆದು ಅಲ್ಲಿ ಮಸೀದೆಯನ್ನು ಕಟ್ಟಿದರು. ಅಲ್ಲಿ ಕುಳಿತು ಅಲ್ಲಾನನ್ನು ಪ್ರಾರ್ಥಿಸ ಹತ್ತಿದರು. ಮಹಮ್ಮದನು ನಿಜವಾಗಿಯೂ ಪೈಗಂಬರನೆಂದು ಎಲ್ಲ ಅರಬರೂ ಒಪ್ಪಿಕೊಂಡರು.

ಮಹಮ್ಮದ ಪೈಗಂಬರರು ಎಲ್ಲ ಕಡೆಗೆ ತಿರುಗಾಡಿ, ತಮ್ಮ ಹೊಸದರ್ಮವಾದ ಇಸ್ಲಾಮ್ ಮತವನ್ನು ಪ್ರಸಾರಮಾಡಿದರು. ದಿನದಿನಕ್ಕೆ ಅವರ ಅನುಯಾಯಿಗಳ ಸಂಖ್ಯೆ ಬೆಳೆಯತೊಡಗಿತು. ಹೀಗೆಯೆ ಪ್ರಚಾರ ಮಾಡುತ್ತ ಮತ್ತೆ ಮದಿನಾ ಪಟ್ಟಣಕ್ಕೆ ಬಂದರು. ಅಲ್ಲಿ ಅವರು ಬೇನೆಯಿಂದ ಹಾಸಿಗೆ ಹಿಡಿದರು; ಆದರೂ ನಿತ್ಯ ಮಸೀದೆಗೆ ಹೋಗಿ ದೇವರ ಪ್ರಾರ್ಥನೆ ಮಾಡುವುದನ್ನು ಬಿಡಲಿಲ್ಲ. ಕೊನೆಗೆ ಕ್ರಿ. ಶ. 631ರಲ್ಲಿ ಅವರ ಅಂತ್ಯವಾಯಿತು.

“ದೇವರು ಒಬ್ಬನೇ. ಮೂರ್ತಿ ಪೂಜೆ ಮಾಡಬಾರದು. ತಾಯಿ-ತಂದೆಗಳ ಸೇವೆ ಮಾಡಬೇಕು. ಜೂಜಾಡಬಾರದು. ಮನುಷ್ಯರೆಲ್ಲರೂ ಸಮಾನರೆಂದು ತಿಳಿಯಬೇಕು.” ಇದು ಅವರ ಉಪದೇಶದ ಸಾರ, ಆವರ ಉಪದೇಶದ ವಚನಗಳೆಲ್ಲ ಕುರಾನ್ ಎಂಬ ಗ್ರಂಥದಲ್ಲಿ ಒಟ್ಟುಗೂಡಿವೆ. ಇದು ಇಸ್ಲಾಮ್ ಧರ್ಮದ ಪವಿತ್ರ ಗ್ರಂಥ .

ಐತಿಹಾಸಿಕ ಕತೆಗಳು ಪುಸ್ತಕದಿಂದ ಸಂಗ್ರಹಿಸಿದ ಕತೆ. ಲೇಖಕರು: ಜಿ.ವಿ ಅಂಗಡಿ.

Leave a Reply

Your email address will not be published. Required fields are marked *