ಚಂದ್ರಗುಪ್ತ ಮೌರ್ಯ: ಒಂದು ಸಾಮ್ರಾಜ್ಯದ ಉಗಮದ ಕತೆ

ಬಹಳ ಹಿಂದಿನ ಕಾಲದ ಕತೆ, ಆಗ ಭಾರತದಲ್ಲಿ ಎಲ್ಲ ಕಡೆಗೂ ಸಣ್ಣ ಸಣ್ಣ ರಾಜ್ಯಗಳಿದ್ದುವು. ಅವುಗಳಲ್ಲಿ ಮಗಧ ಎಂಬ ರಾಜ್ಯವು ಸ್ವಲ್ಪ ದೊಡ್ಡದು. ಅಲ್ಲಿ ನಂದವಂಶದ ರಾಜರು ಆಳುತ್ತಿದ್ದರು. ಆ ಕಾಲದಲ್ಲಿ ಎಲ್ಲ ರಾಜ್ಯಗಳನ್ನೂ ಗೆದ್ದು, ದೊಡ್ಡದೊಂದು ಸಾಮ್ರಾಜ್ಯವನ್ನು ಸ್ಥಾಪಿಸಿದ ಅರಸನೆಂದರೆ ಚಂದ್ರಗುಪ್ತನು. ಅವನೇ ಭಾರತದ ಮೊದಲನೆಯ ಚಕ್ರವರ್ತಿಯೆಂದು ಹೆಸರುಪಡೆದಿದ್ದಾನೆ.
ನಂದರ ರಾಜಧಾನಿ ಪಾಟಲೀಪುತ್ರ. ಈಗಿನ ಬಿಹಾರ ರಾಜ್ಯದಲ್ಲಿದ್ದ ಪಾಟ್ನ ನಗರಕ್ಕೆ ಆಗ ‘ಪಾಟಲೀಪುತ್ರ’ ಎಂದು ಹೆಸರಿತ್ತು. ನಂದವಂಶದ ಕಡೆಯ ಅರಸನೆಂದರೆ ಮಹಾಪದ್ಮ. ಅವನಿಗೆ ಎಂಟುಜನ ಗಂಡು ಮಕ್ಕಳಿದ್ದರು. ಅವರೆಲ್ಲರೂ ದುಷ್ಟರು. ಅವರ ಆಳ್ವಿಕೆಯಿಂದ ಪ್ರಜೆಗಳೆಲ್ಲರೂ ಬೇಸತ್ತಿದ್ದರು. ಮಹಾಪದ್ಮನ ಬಳಿಯಲ್ಲಿ ಮುರಾದೇವಿ ಎಂಬ ಒಬ್ಬ ದಾಸಿ ಯಿದ್ದಳು. ಅವಳ ಮೇಲೆ ಅರಸನ ಪ್ರೀತಿ ಬಹಳ, ಆಕೆಯ ಹೊಟ್ಟೆಯಿಂದ ಚಂದ್ರಗುಪ್ತನು ಹುಟ್ಟಿದನು.
ಬಾಲಕನಾದ ಚಂದ್ರಗುಪ್ತನು ಗಟ್ಟಿಮುಟ್ಟಾದ ಮೈಕಟ್ಟಿನವನೂ ಚುರುಕುಬುದ್ಧಿಯವನೂ ಆಗಿದ್ದನು. ಅವನ ಮುಖದಲ್ಲಿ ರಾಜಕಳೆ ತುಂಬಿ ತುಳುಕುತ್ತಿತ್ತು. ಅವನ ಮುದ್ದು ಮುಖವನ್ನು ಕಂಡು ಎಲ್ಲ ಜನರೂ ಅವನನ್ನು ಪ್ರೀತಿಸುತ್ತಿದ್ದರು. ಆದರೆ ಮಹಾಪದ್ಮನ ಎಂಟು ಜನ ಮಕ್ಕಳೂ ಅವನನ್ನು ಸೇರುತ್ತಿರಲಿಲ್ಲ; ದಾಸೀಪುತ್ರನೆಂದು ಅವನನ್ನು ಹೀಯಾಳಿಸುತ್ತಿದ್ದರು. ಅವರೆಲ್ಲರಿಗಿಂತಲೂ ಚಂದ್ರಗುಪ್ತನು ಬಲಿಷ್ಠನೂ ಚಪಲನೂ ಇದ್ದನು. ಆಟಪಾಟಗಳಲ್ಲಿ ಅವನದೇ ಒಂದು ಕೈ ಮೇಲು. ಆದುದರಿಂದ ಅವರಿಗೆ ಅಸೂಯೆ. ಎಲ್ಲರೂ ಒಂದಾಗಿ, ಒಮ್ಮೊಮ್ಮೆ ಚಂದ್ರಗುಪ್ತನನ್ನು ಆಟದಲ್ಲಿ ಹೊಡೆಯುತ್ತಿದ್ದರು.
ಈ ವಿಡಿಯೋವನ್ನು ಯೌಟ್ಯೂಬಿನಲ್ಲೂ ನೋಡಬಹುದು :
ಇದೇ ಸಮಯದಲ್ಲಿ ಚಾಣಕ್ಯನೆಂಬ ಒಬ್ಬ ಬುದ್ಧಿವಂತ ಬ್ರಾಹ್ಮಣನು ಪಾಟಲೀಪುತ್ರಕ್ಕೆ ಬಂದನು. ಅರಸನ ಒಡೋಲಗಕ್ಕೆ ಹೋದಾಗ, ಗರ್ವಿಷ್ಟರಾದ ನಂದರು ಚಾಣಕ್ಯನನ್ನು ಅಪಮಾನಗೊಳಿಸಿದರು. ಆಗ ಅವನು ನಿಮ್ಮ ವಂಶವನ್ನು ನಿರ್ಮೂಲಮಾಡದಿದ್ದರೆ ನಾನು ಆರ್ಯ ಚಾಣಕ್ಯನೇ ಅಲ್ಲ ಎಂದು ಆಣೆಮಾಡಿ, ಒಡ್ಡೋಲಗದಿಂದ ಹೊರಗೆ ಬಂದನು. ಬರುವಾಗ ಅವನು, ದಾರಿಯಲ್ಲಿ ಗೆಳೆಯರೊಂದಿಗೆ ಆಡುತ್ತಿದ್ದ ಚಂದ್ರಗುಪ್ತನನ್ನು ಕಂಡನು. ಆ ಬಾಲಕನಲ್ಲಿಯ ರಾಜಕಳೆಯನ್ನು ನೋಡಿ ಚಾಣಕ್ಯನಿಗೆ ಕುತೂಹಲ ಹುಟ್ಟಿತು. “ಈ ಬಾಲಕನು ಮುಂದೆ ರಾಜನಾಗುವನು. ಇವನಿಗೆ ತಕ್ಕ ವಿದ್ಯಾಬುದ್ಧಿಗಳನ್ನು ಕಲಿಸುವೆನು” ಎಂದು ಚಾಣಕ್ಯನು ಮುರಾದೇವಿಗೆ ಹೇಳಿದನು. ನಂದರು ಆಗಾಗ ಕೊಡುತ್ತಿದ್ದ ತೊಂದರೆಗಳಿಗಾಗಿ ಆಕೆಯೂ ಬೇಸತ್ತಿದ್ದಳು. ಆದುದರಿಂದ ಮಗನನ್ನು ಚಾಣಕ್ಯನ ಸಂಗಡ ಕಳುಹಲು ಆಕೆ ಸಮ್ಮತಿಸಿದಳು.
ಚಾಣಕ್ಯನು ಚಂದ್ರಗುಪ್ತನಿಗೆ, ಅರಸುಮಗನಿಗೆ ಬೇಕಾಗುವ ಎಲ್ಲ ನಂದರಿಗೆ ಇದು ವಿದ್ಯೆಗಳನ್ನೂ ಕಲಿಸಿದನು. ರಾಜನೀತಿಯ ತಂತ್ರಗಳನ್ನು ಕಲಿಸಿದನು. ಯೋಗ್ಯರಾದ ಅರಸರ ಗೆಳೆತನವನ್ನು ಹೇಗೆ ಮಾಡಬೇಕು. ವೈರಿಗಳ ಶಕ್ತಿಯನ್ನು ಹೇಗೆ ಕುಗ್ಗಿಸಬೇಕು. ಪ್ರಜೆಗಳ ಮನಸ್ಸನ್ನು ಒಲಿಸಬೇಕಾದರೆ ಯಾವ ರೀತಿಯಿಂದ ನಡೆದುಕೊಳ್ಳಬೇಕು-ಇವೇ ಮೊದಲಾದ ವಿಷಯಗಳನ್ನು ಚಂದ್ರಗುಪ್ತನು ಚೆನ್ನಾಗಿ ಕಲಿತುಕೊಂಡನು. ನಂದರಿಗೆ ಇದು ಗೊತ್ತಾಯಿತು. ಚಂದ್ರಗುಪ್ತನು ತಮ್ಮ ರಾಜ್ಯವನ್ನು ಅಪಹರಿಸಬಹುದೆಂದು ಅವರು ಸಂಶಯಪಟ್ಟು, ಅವನನ್ನು ಕೊಲ್ಲಲು ಹವಣಿಸಿದರು. ಇದು ಚಾಣಕ್ಯನಿಗೂ ಗೊತ್ತಾಯಿತು. ಆದುದರಿಂದ ಅವನು ಚಂದ್ರಗುಪ್ತನನ್ನು ಕರೆದುಕೊಂಡು, ಬಹಳ ದೂರದ ತಕ್ಷಶಿಲೆ ಎಂಬಲ್ಲಿಗೆ ಹೋದನು. ಅಲ್ಲಿಯೇ ಚಂದ್ರಗುಪ್ತನು ದೊಡ್ಡವನಾದನು.
ದೊಡ್ಡವನಾದ ಮೇಲೆ ಚಂದ್ರಗುಪ್ತನು ಸುಮ್ಮನೆ ಕುಳಿತುಕೊಳ್ಳಲಿಲ್ಲ. ಅತ್ತಿತ್ತ ಗುಡ್ಡಗಾಡಿನ ಪ್ರದೇಶಗಳನ್ನು ತಿರುಗಾಡಿದನು; ಅಲ್ಲಿಯ ಕೆಲವು ರಾಜರ ಗೆಳೆತನವನ್ನು ಮಾಡಿದನು. ಅವರ ಸಹಾಯದಿಂದ ದೊಡ್ಡದೊಂದು ಸೈನ್ಯವನ್ನು ಸಿದ್ಧಪಡಿಸಿದನು. ತನ್ನ ಸೈನ್ಯದೊಂದಿಗೆ ಮಗಧ ರಾಜ್ಯದಮೇಲೆ ದಂಡೆತ್ತಿ ಹೋದನು. ನಂದರ ದುಷ್ಟ ಆಳ್ವಿಕೆಯಿಂದ ಪ್ರಜೆಗಳೂ ಬೇಸತ್ತಿದ್ದರು. ನಂದರ ಸೈನ್ಯದಲ್ಲಿಯ ಕೆಲವರೂ, ನಂದರು ಹಾಳಾಗಲೆಂದೇ ಇಚ್ಛೆಪಡುತ್ತಿದ್ದರು. ಆದುದರಿಂದ ಚಂದ್ರಗುಪ್ತನನ್ನು ಯುದ್ಧದಲ್ಲಿ ಸೋಲಿಸುವುದು ನಂದರಿಗೆ ಸಾಧ್ಯವಾಗಲಿಲ್ಲ. ಅವನು ನಂದರನ್ನು ಗೆದ್ದು ಅವರೆಲ್ಲರನ್ನೂ ಕೊಲ್ಲಿಸಿದನು. ನಂದರ ಮಂತ್ರಿಯಾದ ಅಮಾತ್ಯರಾಕ್ಷಸನೆಂಬವನು ಮಾತ್ರ ತಪ್ಪಿಸಿಕೊಂಡು ಹೋದನು. ಮಗಧರಾಜ್ಯವು ಚಂದ್ರಗುಪ್ತನ ಕೈಸೇರಿತು. ಬಹಳ ವೈಭವದಿಂದ ಅವನಿಗೆ ಪಾಟಲೀಪುತ್ರದಲ್ಲಿ ರಾಜ್ಯಾಭಿಷೇಕ ನಡೆಯಿತು. ಚಾಣಕ್ಯನು ಚಂದ್ರಗುಪ್ತನ ಮಂತ್ರಿಯಾದನು.
ನಂದರ ಪಕ್ಷದವನಾದ ಅಮಾತ್ಯರಾಕ್ಷಸನು ತಪ್ಪಿಸಿಕೊಂಡು ಹೋದನಷ್ಟೇ? ಅವನು ಚಂದ್ರಗುಪ್ತನನ್ನು ಬಹುಪರಿಯಿಂದ ಪೀಡಿಸಿದನು. ಒಮ್ಮೆ ಔಪಧಿಯಲ್ಲಿ ವಿಷಕೂಡಿಸಿ ಚಂದ್ರಗುಪ್ತನಿಗೆ ಕುಡಿಸುವ ಹಂಚಿಕೆ ಹಾಕಿದನು. ಮತ್ತೊಮ್ಮೆ ಮಲಗಿಕೊಂಡ ಅರಸನನ್ನು ಕೊಲ್ಲಲು ಚಾಂಡಾಲರನ್ನು ಕಳುಹಿದ್ದನು. ಈ ಒಳಸಂಚುಗಳು ಚಾಣಕ್ಯನಿಗೆ ಹೇಗೋ ಗೊತ್ತಾದುವು. ಅವನು ಇವುಗಳಿಂದ ಚಂದ್ರಗುಪ್ತನನ್ನು ಪಾರುಮಾಡಿದನು. ಚಾಣಕ್ಯನ ಮುಂದೆ ತನ್ನ ಆಟ ನಡೆಯದಾಗಲು, ರಾಕ್ಷಸನು ಎಲ್ಲಿಯೋ ತಲೆತಪ್ಪಿಸಿಕೊಂಡು ಇರಹತ್ತಿದನು.
ಅರಸನಾದ ಕೆಲವೇ ದಿನಗಳಲ್ಲಿ ಚಂದ್ರಗುಪ್ತನು ದಿಗ್ವಿಜಯಕ್ಕೆ ಹೊರಟನು. ಪೂರ್ವಕ್ಕೆ ಬಂಗಾಲದವರೆಗೆ ಬೆಳೆಸಿದನು. ಆಗ ಪಂಜಾಬದಲ್ಲಿ ಸಿಕಂದರನ(Alexander) ರಾಯಭಾರಿಯಾದ ಸೆಲ್ಯೂಕಸನು ಆಳುತ್ತಿದ್ದನು. ಅವನು ಬಹಳ ಬಲಾಢ್ಯನಿದ್ದನು. ಚಂದ್ರಗುಪ್ತನು ಅವನ ಮೇಲೆ ಏರಿಹೋದನು. ಸೆಲ್ಯೂಕಸನು ಸೋತು ಅವನೊಡನೆ ಒಪ್ಪಂದಮಾಡಿಕೊಂಡನು. ಚಂದ್ರಗುಪ್ತನ ಶೌರ, ಸಾಹಸಗಳಿಗೆ ಮೆಚ್ಚಿ ಸೆಲ್ಯೂಕಸನು, ತನ್ನ ಮಗಳನ್ನು ಅವನಿಗೆ ಕೊಟ್ಟು ಲಗ್ನ ಮಾಡಿದನು. ಅಲ್ಲದೆ ಕಾಬೂಲ- ಕಂದಹಾರಗಳನ್ನು ವರದಕ್ಷಿಣೆಯಾಗಿ ಕೊಟ್ಟನು. ಇದರಿಂದ ಚಂದ್ರಗುಪ್ತನ ರಾಜ್ಯವು ಬಂಗಾಲದಿಂದ ಇರಾಣದವರೆಗೆ ಹಬ್ಬಿತು. ಭಾರತದಲ್ಲಿಯ ಮೊದಲನೆಯ ಸಾಮ್ರಾಜ್ಯವು ಇದೇ! ಚಂದ್ರಗುಪ್ತನು ತನ್ನ ತಾಯಿಗೆ ಮಹತ್ತ್ವಕೊಟ್ಟು, ತನ್ನ ವಂಶಕ್ಕೆ ‘ಮೌರ್ಯವಂಶ’ ಎಂದೂ ತನ್ನ ಸಾಮ್ರಾಜ್ಯಕ್ಕೆ ಮೌರ್ಯಸಾಮ್ರಾಜ್ಯ’ ಎಂದೂ ಹೆಸರಿಟ್ಟನು.
ಚಾಣಕ್ಯ ಮಂತ್ರಿಯ ಸಹಾಯದಿಂದ ಚಂದ್ರಗುಪ್ತನು ತನ್ನ ರಾಜ್ಯವನ್ನು ಒಳ್ಳೆಯ ರೀತಿಯಿಂದ ಆಳಿದನು. ಪ್ರವಾಸಿಕರ ಸಲುವಾಗಿ ಒಳ್ಳೆಯ ರಾಜ ಮಾರ್ಗಗಳನ್ನು ಮಾಡಿಸಿದನು; ಅಲ್ಲಲ್ಲಿಗೆ ಧರ್ಮಸಾಲೆಗಳನ್ನು ಕಟ್ಟಿಸಿದನು; ಒಕ್ಕಲಿಗರ ಅನುಕೂಲತೆಗಾಗಿ ಕೆರೆ-ಕಟ್ಟೆಗಳನ್ನು ಕಟ್ಟಿಸಿದನು; ಪ್ರಜೆಗಳ ನ್ಯಾಯವಿಚಾರಣೆಯನ್ನು ತಾನೇ ಮಾಡುತ್ತಿದ್ದನು. ಕಳವು, ಕೊಲೆ, ಸುಲಿಗೆ ಮತ್ತು ರಾಜದ್ರೋಹ ಮಾಡಿದವರನ್ನು ಅವನು ಶಿಕ್ಷಿಸದೆ ಬಿಡುತ್ತಿದ್ದಿಲ್ಲ. ಪಟ್ಟಣಗಳಲ್ಲಿಯೂ ಹಳ್ಳಿಗಳಲ್ಲಿಯೂ ಗೂಢಚಾರರನ್ನಿಟ್ಟು, ಅವರಿಂದ ಎಲ್ಲ ಸಂಗತಿಗಳನ್ನು ತಿಳಿದುಕೊಳ್ಳುತ್ತಿದ್ದನು. ಆಡಳಿತದ ಅನುಕೂಲತೆಗಾಗಿ ಬೇರೆ ಬೇರೆ ಖಾತೆಗಳನ್ನು ರಚಿಸಿ, ಅವುಗಳನ್ನು ದಕ್ಷರಾದ ಅಧಿಕಾರಿಗಳ ಕೈಯಲ್ಲಿ ಕೊಟ್ಟಿದ್ದನು. ಇವೆಲ್ಲಕ್ಕೂ ಚಾಣಕ್ಯನ ಚಾತುರ್ಯವೇ ಮುಖ್ಯ ಕಾರಣವಾಗಿತ್ತು.
ಚಂದ್ರಗುಪ್ತನ ರಾಜ್ಯವು ಒಳ್ಳೆಯ ಘನತೆಯನ್ನು ಪಡೆದಿತ್ತು. ಅವನು ಸುಮಾರು 25 ವರುಷಗಳ ಕಾಲ ರಾಜ್ಯವಾಳಿದನು. ಮುಪ್ಪಿನವನಾಗಲು ರಾಜ್ಯಭಾರವನ್ನು ತನ್ನ ಮಗನಾದ ಬಿಂದುಸಾರನಿಗೆ ಒಪ್ಪಿಸಿ, ತಾನು ಭದ್ರಬಾಹು ಮುನಿಗಳ ಶಿಷ್ಯನಾಗಿ ಜೈನಧರ್ಮವನ್ನು ಸ್ವೀಕರಿಸಿದನು. ಗುರುಗಳೊಡನೆ ಅವನು, ಈಗ ಮೈಸೂರು(ಕರ್ನಾಟಕ) ರಾಜ್ಯದಲ್ಲಿ ಇರುವ ಶ್ರವಣಬೆಳುಗೊಳಕ್ಕೆ ಬಂದು ನಿಂತನು. ಅಲ್ಲಿಯೇ ಕ್ರಿ. ಪೂ. 296ರಲ್ಲಿ ನಿರ್ವಾಣವನ್ನು ಹೊಂದಿದನು.
ಚಂದ್ರಗುಪ್ತನ ಆಳಿಕೆಯಲ್ಲಿ ಮೆಗಾಸ್ತನೀಸ್ ಎಂಬ ಗ್ರೀಸದೇಶದ ಪ್ರವಾಸಿಯು ಇಲ್ಲಿಗೆ ಬಂದಿದ್ದನು. ಅವನು ಚಂದ್ರಗುಪ್ತನ ಆಸ್ಥಾನದಲ್ಲಿಯೆ ಇದ್ದನು. ಅವನು ತನ್ನ ಗ್ರಂಥದಲ್ಲಿ ಮೌರ್ಯ ಸಾಮ್ರಾಜ್ಯದ ಬಗೆಗೆ ಹೀಗೆ ಬರೆದಿದ್ದಾನೆ: “ಪಾಟಲೀಪುತ್ರ ನಗರವು ಅತಿ ವೈಭವದಿಂದ ಮೆರೆಯುತ್ತದೆ. ಇಲ್ಲಿಯ ಜನರು ಯೋಗ್ಯರು; ಧೈಯ್ಯಶಾಲಿಗಳು, ಸ್ತ್ರೀಯರೆಲ್ಲರೂ ಗುಣವತಿಯರು. ಜನರು ವಿಶ್ವಾಸವುಳ್ಳವರು, ಒಬ್ಬರನ್ನೊಬ್ಬರು ಮೋಸಗೊಳಿಸುವುದಿಲ್ಲ. ರಾಜ್ಯದಲ್ಲಿ ಕಳವು-ಸುಲಿಗೆಗಳ ಸುಳಿವು ಕೂಡ ಇಲ್ಲ.”
ಐತಿಹಾಸಿಕ ಕತೆಗಳು ಪುಸ್ತಕದಿಂದ ಸಂಗ್ರಹಿಸಿದ ಕತೆ. ಲೇಖಕರು: ಜಿ.ವಿ ಅಂಗಡಿ.