ಬೋಧಿ ವೃಕ್ಷದ ಕೆಳಗೆ ಜ್ಞಾನದ ಬೆಳಕು: ಗೌತಮ ಬುದ್ಧನ ಕಥೆ

ಹಿಮಾಲಯ ಪರ್ವತದ ಅಡಿಯಲ್ಲಿ ನೇಪಾಳ ಎಂಬುದೊಂದು ದೇಶವಿದೆ. ಅದರ ದಕ್ಷಿಣಗಡಿಯಲ್ಲಿ 2500 ವರುಷಗಳ ಹಿಂದೆ ಕಪಿಲವಸ್ತು ಎಂಬ ನಗರವು ಇದ್ದಿತು. ಅಲ್ಲಿ ಶುದ್ಧೋದನನೆಂಬ ಅರಸನು ರಾಜ್ಯವಾಳುತ್ತಿದ್ದನು. ಅವನಿಗೆ ಇಬ್ಬರು ಹೆಂಡಿರು ಇದ್ದರು. ಹಿರಿಯವಳು ಮಾಯಾದೇವಿ; ಕಿರಿಯವಳು ಗೌತಮಿ. ಬಹಳ ದಿವಸಗಳವರೆಗೆ ಅವರಿಬ್ಬರಿಗೂ ಮಕ್ಕಳಾಗಲಿಲ್ಲ. ಗಂಡಹೆಂಡಂದಿರು ಭಕ್ತಿಯಿಂದ ದೇವರನ್ನು ಪೂಜಿಸಿದರು. ದಾನ-ಧರ್ಮಗಳನ್ನು ಮಾಡಿದರು. ಕೊನೆಗೆ ತನ್ನ 45ನೆಯ ವರುಷದ ವಯಸ್ಸಿನಲ್ಲಿ ಮಾಯಾದೇವಿ ಬಸಿರೆಯಾದಳು. ಎಲ್ಲರಿಗೂ ಬಹಳ ಸಂತೋಷವಾಯಿತು.
ಮಾಯಾದೇವಿ ಹೆರಿಗೆಗೆಂದು ತನ್ನ ಪರಿವಾರದೊಂದಿಗೆ ತವರೂರಿಗೆ ಹೊರಟಳು. ದಾರಿಯಲ್ಲಿ ಲುಂಬಿಣಿ ಎಂಬ ವನದಲ್ಲಿ ವಿಶ್ರಾಂತಿಗೆಂದು ಅವರು ತಂಗಿದ್ದರು. ಅದೇ ಸಮಯದಲ್ಲಿ ಆಕೆ ಸುಂದರವಾದ ಒಂದು ಗಂಡುಮಗುವನ್ನು ಹೆತ್ತಳು. ಈ ಸುದ್ದಿಯನ್ನು ಕೇಳಿ ರಾಜ ಹಿರಿಹಿರಿ ಹಿಗ್ಗಿದ. ಪ್ರಜೆಗಳೆಲ್ಲರೂ ಸಂತೋಷದಿಂದ ನಲಿದರು. ರಾಣಿಯನ್ನು ರಾಜ್ಯವೈಭವದಿಂದ ಕಪಿಲವಸ್ತುವಿಗೆ ಕರೆತಂದರು. ಕೂಸಿಗೆ ಸಿದ್ಧಾರ್ಥನೆಂದು ಹೆಸರನ್ನಿಟ್ಟರು. ಪದ್ಧತಿಯಂತೆ ಜೋಯಿಸರನ್ನು ಕರೆಸಿ ಅರಸನು ಮಗುವಿನ ಜಾತಕವನ್ನು ನೋಡಿಸಿದನು. ಜೋಯಿಸರು ಮಗುವನ್ನು ನೋಡಿ ಈ ಹುಡುಗನು ಮುಂದೆ ಪ್ರಪಂಚದ ಕಡೆಗೆ ಒಲಿದರೆ, ಮಹಾಬಲಶಾಲಿಯಾದ ರಾಜನಾಗುವನು. ಸಂನ್ಯಾಸದ ಕಡೆಗೆ ಮನಸ್ಸು ಮಾಡಿದರೆ, ಶ್ರೇಷ್ಠನಾದ ಯೋಗಿಯಾಗುವನು ಎಂದು ಹೇಳಿದರು. ಇದನ್ನು ಕೇಳಿ ಆನಂದವೂ ಆಯಿತು; ದುಃಖವೂ ಆಯಿತು. ಮುಂದೆ ಕೆಲವು ದಿನಗಳಲ್ಲಿಯೆ ಮಾಯಾದೇವಿ ತೀರಿಕೊಂಡಳು. ಮಗುವನ್ನು ಚಿಕ್ಕತಾಯಿ ಗೌತಮಿ ಜೋಕೆಮಾಡಹತ್ತಿದಳು.
ಸಿದ್ಧಾರ್ಥ ಬಿದಿಗೆಯ ಚಂದ್ರನಂತೆ ಬೆಳೆಯತೊಡಗಿದ. ಅವನಿಗೆ ವಿದ್ಯಾಭ್ಯಾಸವನ್ನು ಪ್ರಾರಂಭಿಸುವಷ್ಟು ವಯಸ್ಸಾಯಿತು. ಶುದ್ಧೋದನ ರಾಜನು ಮಗನಿಗಾಗಿ ಮೂರು ಅರಮನೆಗಳನ್ನು ಕಟ್ಟಿಸಿದನು. ಮಳೆ-ಚಳಿ-ಬೇಸಗೆ ಈ ಮೂರೂ ಕಾಲಗಳಲ್ಲಿಯೂ ಸಿದ್ಧಾರ್ಥನಿಗೆ ಸುಖವು ಉಂಟಾಗುವಂತೆ ಅವುಗಳಲ್ಲಿ ವ್ಯವಸ್ಥೆಯಿತ್ತು. ಅಲ್ಲಿ ಕುಮಾರನ ವಿದ್ಯಾಭ್ಯಾಸಕ್ಕಾಗಿ ಯೋಗ್ಯರಾದ ಗುರುಗಳನ್ನು ನೇಮಿಸಲಾಯಿತು. ಜಗತ್ತಿನ ದುಃಖದ ಅರಿವು ಬಾಲಕನಿಗೆ ಸ್ವಲ್ಪವೂ ಆಗದಂತೆ ವಿದ್ಯಾಭ್ಯಾಸ ಮಾಡಿಸಬೇಕೆಂದು ರಾಜನು ಗುರುಗಳಿಗೆ ಹೇಳಿದನು. ಸಿದ್ಧಾರ್ಥನ ಜೊತೆಯಲ್ಲಿ ಆಟವಾಡುವುದಕ್ಕೆ ಗಟ್ಟಿಮುಟ್ಟಾದ ಸುಂದರವಾದ ಬಾಲಕರನ್ನೇ ಆರಿಸಿ ಒದಗಿಸಿಕೊಟ್ಟನು. ಯಾವ ದುಃಖದ ನೋಟವೂ ಸಿದ್ಧಾರ್ಥನ ಕಣ್ಣಿಗೆ ಬೀಳದಂತೆ ಎಲ್ಲ ಬಗೆಯ ಏರ್ಪಾಡು ನಡೆಯಿತು.
ಸಿದ್ಧಾರ್ಥ ಬಲು ಕುಶಲಬುದ್ಧಿಯವ, ಗುರುಗಳು ಹೇಳಿದ ಪಾಠಗಳನ್ನು ತಪ್ಪದೆ ಕಲಿಯುತ್ತಿದ್ದ. ಕತ್ತಿ ತಿರುವುವುದು, ಕುದುರೆ ಹತ್ತುವುದು ಮುಂತಾದ ವಿದ್ಯೆಗಳನ್ನೂ ಮನಸ್ಸುಗೊಟ್ಟು ಕಲಿತನು. ಒಂದು ದಿನ ಅವನು ವನದಲ್ಲಿ ತಿರುಗಾಡುತ್ತಿದ್ದನು. ಆಗ ಹಂಸಪಕ್ಷಿಗಳ ಹಿಂಡೊಂದು ಆಕಾಶದಲ್ಲಿ ಹಾರಿ ಹೋಗುತ್ತಿತ್ತು. ಅವನು ನೋಡುತ್ತಿದ್ದಂತೆಯೇ ಒಂದು ಹಂಸಪಕ್ಷಿಯು ಚೀರುತ್ತ ಅವನ ಕಾಲ ಬಳಿ ಬಂದು ಬಿತ್ತು. ಅವನು ಅದನ್ನು ಎತ್ತಿಕೊಂಡನು. ‘ಪಾಪ! ಹಾರುವ ಪಕ್ಷಿ’ ಎಂದು ಕಳವಳಿಸಿದನು. ಯಾರೋ ಅದನ್ನು ಬಾಣದಿಂದ ಹೊಡೆದಿದ್ದರು. ನೋಡಿ ಸಿದ್ಧಾರ್ಥ ಮರುಗಿದನು. ಅದಕ್ಕೆ ತಗುಲಿದ ಬಾಣವನ್ನು ಕಿತ್ತು ಔಷಧ ಹಚ್ಚಿದನು. ನೀರನ್ನು ಕುಡಿಸಿದನು. ಪೂರ್ಣವಾಗಿ ಗುಣಹೊಂದಿದ ಮೇಲೆ ಅದನ್ನು ಮತ್ತೆ ಹಾರಿಸಿಬಿಟ್ಟನು.
ಸಿದ್ಧಾರ್ಥನು ಹದಿನೆಂಟು ವರುಷದವನಾಗಲು, ಅರಸನು ಅವನಿಗೆ ಯಶೋಧರೆಯೆಂಬ ಸುಂದರ ರಾಜಕುಮಾರಿಯನ್ನು ಮದುವೆ ಮಾಡಿದನು. ಸಿದ್ಧಾರ್ಥನು ಯಶೋಧರೆಯೊಡನೆ ಸುಖವಾಗಿ ದಿನಗಳನ್ನು ಕಳೆಯುತ್ತಿದ್ದನು. ಕೆಲವು ದಿನಗಳ ತರುವಾಯ ಯಶೋಧರೆಯು ಗರ್ಭಿಣಿಯಾಗಿ ಒಂದು ಗಂಡುಮಗುವನ್ನು ಹೆತ್ತಳು. ಕೂಸಿಗೆ ರಾಹುಲನೆಂದು ಹೆಸರಿಟ್ಟರು. ಮಗನ ಮುಖವನ್ನು ಕಂಡು ಸಿದ್ಧಾರ್ಥನಿಗೆ ಹಿಡಿಸಲಾರದಷ್ಟು ಆನಂದವಾಯಿತು. ಯುವರಾಜನಾದ ಸಿದ್ಧಾರ್ಥನಿಗೆ ಗಂಡುಮಗು ಹುಟ್ಟಿದ ಸುದ್ದಿ ಊರಲ್ಲೆಲ್ಲ ಹಬ್ಬಿತು. ಪ್ರಜೆಗಳೆಲ್ಲರೂ ಅರಸು ಮಗನ ಜನ್ಮದಿನೋತ್ಸವವನ್ನು ಆಚರಿಸಿದರು. ಊರನ್ನೆಲ್ಲ ಶೃಂಗರಿಸಿದ್ದರು. ಎಲ್ಲ ಕಡೆಗೂ ತಳಿರು-ತೋರಣಗಳನ್ನು ಕಟ್ಟಿದ್ದರು; ಧ್ವಜ ಪತಾಕೆಗಳು ಹಾರಾಡುತ್ತಿದ್ದುವು. ಜನರು ತಮ್ಮ ಅಂಗಳಗಳನ್ನು ಸಾರಿಸಿ ಬಣ್ಣ ಬಣ್ಣದ ರಂಗವಲ್ಲಿ ಹಾಕಿದ್ದರು. ಪಟ್ಟಣದ ಆ ಶೋಭೆಯನ್ನು ನೋಡಬೇಕೆಂದು ಸಿದ್ಧಾರ್ಥನಿಗೆ ಮನಸ್ಸಾಯಿತು.
ತನ್ನ ಸಾರಥಿಯಾದ ಚೆನ್ನನಿಗೆ ರಥ ಶೃಂಗರಿಸಲು ಹೇಳಿದನು. ತಾನೂ ಅಲಂಕಾರದ ಬಟ್ಟೆ ಬರೆ ತೊಟ್ಟು ರಥದಲ್ಲಿ ಕುಳಿತನು. ಊರ ಶೋಭೆಯನ್ನು ನೋಡುತ್ತ ಸಾಗಿದನು. ಸ್ವಲ್ಪ ದೂರ ಹೋಗುವಷ್ಟರಲ್ಲಿ ಒಬ್ಬ ಮುಪ್ಪಿನ ಮುದುಕನು ಬಡಿಗೆ ಊರುತ್ತ ನಡೆದುದು ಸಿದ್ಧಾರ್ಥನ ಕಣ್ಣಿಗೆ ಬಿತ್ತು. ಆ ಮುದುಕನ ನಡುವು ಬಾಗಿತ್ತು. ಕೂದಲು ಬೆಳ್ಳಗಾಗಿದ್ದುವು. ಮೈಯಲ್ಲಿ ಎಲುವು-ಚರ್ಮಗಳಷ್ಟೇ ಉಳಿದಿದ್ದುವು. ಇದನ್ನು ಕಂಡು ಸಿದ್ಧಾರ್ಥನಿಗೆ ಆಶ್ಚರವಾಯಿತು. ‘ಅದೇನು ಚೆನ್ನಾ’ ಎಂದು ಚೆನ್ನನನ್ನು ಕೇಳಿದನು. ಅದಕ್ಕೆ ಚೆನ್ನನು ‘ಅವನೂ ಒಬ್ಬ ಮನುಷ್ಯ; ಮುಪ್ಪಿನವನಾಗಿದ್ದಾನೆ!’ ಎಂದು ಹೇಳಿದನು. ‘ಮನುಷ್ಯರೆಲ್ಲರಿಗೆ ಮುಪ್ಪು ಬರುವುದು’ ಎಂಬುದು ಅಂದು ಅವನಿಗೆ ಗೊತ್ತಾಯಿತು. ಅಷ್ಟಕ್ಕೆ ಮರಳಿ ಅರಮನೆಗೆ ಹೋದನು.
ಮತ್ತೊಮ್ಮೆ ರೋಗದಿಂದ ಬಳಲುವ ಒಬ್ಬ ರೋಗಿಯನ್ನು ಸಿದ್ಧಾರ್ಥ ನೋಡಿದನು; ಇನ್ನೊಮ್ಮೆ ಸ್ಮಶಾನಕ್ಕೆ ಸಾಗಿಸುತ್ತಿರುವ ಒಂದು ಹೆಣವನ್ನು ಕಂಡನು. ‘ಮನುಷ್ಯನಿಗೆ ರೋಗ ಬರುವುದು, ಮನುಷ್ಯನು ಮುದುಕನಾಗುವನು; ಮನುಷ್ಯನು ಸಾಯುವನು’ ಎಂಬ ಮಾತುಗಳು ಸಿದ್ಧಾರ್ಥನ ಮನಸ್ಸಿಗೆ ನೋವನ್ನುಂಟು ಮಾಡಿದುವು. ‘ಇವುಗಳನ್ನು ನಿವಾರಿಸಲು ಮರವಿಲ್ಲವೇ?’ ಎಂದು ವಿಚಾರಮಾಡತೊಡಗಿದನು. ಅಂತಹ ಮಾರ್ಗವನ್ನು ಕಂಡುಹಿಡಿಯಲು ಅದೇ ದಿವಸ ಸಂಸಾರವನ್ನು ಬಿಟ್ಟು ಅರಣ್ಯಕ್ಕೆ ಹೋಗುವುದಾಗಿ ನಿಶ್ಚಯಿಸಿದನು.
ಅಂದು ಹುಣ್ಣಿಮೆಯ ರಾತ್ರಿ. ಅರಮನೆಯಲ್ಲಿ ಎಲ್ಲರೂ ಮಲಗಿದ್ದಾರೆ. ಯಶೋಧರೆಯೂ ಮಲಗಿ ನಿದ್ರಿಸುತ್ತಿದ್ದಾಳೆ. ಆಕೆಯ ಪಕ್ಕದಲ್ಲಿ ಮುದ್ದು ಮಗು ರಾಹುಲನೂ ಮಲಗಿದ್ದಾನೆ. ಸಿದ್ಧಾರ್ಥನು ಕಾಲಸಪ್ಪಳವಾಗದಂತೆ ಯಶೋಧರೆಯ ಹತ್ತಿರ ಬಂದನು. ತನ್ನ ಪ್ರೀತಿಯ ಹೆಂಡತಿಗೆ ಹಾಗು ಮುದ್ದುಮಗನಿಗೆ ಕೊನೆಯದಾಗಿ ಮುದ್ದಿಡಬೇಕೆಂದು ಆತನಿಗೆ ಮನಸ್ಸಾಯಿತು. ಆದರೆ ಅವನು ಮನಸ್ಸನ್ನು ಜಗ್ಗಿ ಹಿಡಿದನು. ಹೆಂಡತಿ ಎಚ್ಚತ್ತರೆ ತನ್ನ ಎಲ್ಲ ಗುಟ್ಟು ಹಾಳಾಗುವುದೆಂದು ಯೋಚಿಸಿದನು. ಹೆಂಡತಿಯನ್ನೂ ಮಗನನ್ನೂ ಒಂದುಸಲ ಕಣ್ಣು ತುಂಬ ನೋಡಿ, ಕೂಡಲೆ ಅವನು ಸಾವಕಾಶವಾಗಿ ಹೊರಗೆ ಬಂದನು.
ಚೆನ್ನ ತನ್ನ ಒಡೆಯನ ಅಪ್ಪಣೆಯಂತೆ ಕುದುರೆಯನ್ನು ಸಿದ್ಧಗೊಳಿಸಿದ್ದನು. ಸಿದ್ಧಾರ್ಥ ಕುದುರೆಯನ್ನು ಹತ್ತಿದ. ಇಬ್ಬರೂ ಕೋಟೆಯನ್ನು ದಾಟಿದರು. ಬೆಳುದಿಂಗಳಲ್ಲಿ ಬಹಳ ದೂರ ನಡೆದುಹೋದರು. ಬೆಳಗಾಗುವುದರೊಳಗೆ ಅವರು ‘ಅನೋಮಾ’ ನದಿಯ ದಡವನ್ನು ಸೇರಿದರು. ಸಿದ್ಧಾರ್ಥನು ಚೆನ್ನನಿಗೆ ತನ್ನ ಎಲ್ಲ ಆಭರಣಗಳನ್ನೂ ಉಡುಪುಗಳನ್ನೂ ಕೊಟ್ಟನು. ಕುದುರೆಯನ್ನು ತೆಗೆದುಕೊಂಡು ರಾಜಧಾನಿಗೆ ತಿರುಗಿಹೋಗಲು ಹೇಳಿದನು. ಒಡೆಯನನ್ನು ಬಿಟ್ಟು ತೆರಳುವುದಕ್ಕೆ ಚೆನ್ನನಿಗೆ ಬಲು ದುಃಖವಾಯಿತು. ಸಿದ್ಧಾರ್ಥನನ್ನು ಹತ್ತಿಸಿಕೊಂಡು ಬಂದಿದ್ದ ಕಂಥಕನೆಂಬ ಕುದುರೆಯೂ ಕಣ್ಣೀರು ಸುರಿಸಿತು. ನಿರ್ವಾಹವಿಲ್ಲದೆ ಚೆನ್ನನು ಹಿಂದಿರುಗಿದನು. ಒಡೆಯನನ್ನು ಅಗಲಿದ ದುಃಖದಿಂದ ‘ಕಂಥಕ’ ಕುದುರೆಯು ದಾರಿಯಲ್ಲಿಯೇ ಬಿದ್ದು ಪ್ರಾಣಬಿಟ್ಟಿತು. ಚೆನ್ನನೊಬ್ಬನೇ ತಿರುಗಿಬಂದು ಎಲ್ಲ ಸಂಗತಿಯನ್ನೂ ಅರಮನೆಯಲ್ಲಿ ತಿಳುಹಿದನು.
ಇತ್ತ ಸಿದ್ಧಾರ್ಥನು ಅಲ್ಲಿ ಇಲ್ಲಿ ತಿರುಗುತ್ತ ಮಗಧರಾಜ್ಯದ ರಾಜಧಾನಿಯಾದ ರಾಜಗೃಹಕ್ಕೆ ಬಂದನು. ಅಲ್ಲಿ ಅಲಾರ ಕಲಾಮ ಮತ್ತು ಉದ್ರಕ ರಾಮಪುತ್ರ ಎಂಬ ಬ್ರಾಹ್ಮಣ ಪಂಡಿತರ ಬಳಿ ವೇದಶಾಸ್ತ್ರಗಳನ್ನು ಅಭ್ಯಾಸಮಾಡಿದನು. ಅವರಿಂದ ಅವನ ಮನಸ್ಸಿಗೆ ಶಾಂತಿ ಸಿಗಲಿಲ್ಲ. ಅದನ್ನು ಬಿಟ್ಟು ಅಲ್ಲಿಯೆ ಸಮೀಪದಲ್ಲಿ ಇರುವ ಗ್ರಧೃಕೂಟ ಶಿಖರದ ಗುಹೆಯಲ್ಲಿ ಕುಳಿತು ವ್ರತ-ಉಪವಾಸಗಳನ್ನು ಮಾಡಿದನು. ಅಲ್ಲಿ ಇರುವಾಗ ಒಂದುದಿನ ಸಿದ್ಧಾರ್ಥನು, ಅರಸನ ಯಜ್ಞಕ್ಕೆ ಕುರುಬನೊಬ್ಬನು ಕುರಿಗಳನ್ನು ಹೊಡೆದುಕೊಂಡು ಹೋಗುವುದನ್ನು ಕಂಡನು. ಸಣ್ಣಮರಿಯೊಂದು ನಡೆಯಲಾರದೆ ಒದರುತ್ತಿತ್ತು. ಸಿದ್ಧಾರ್ಥನಿಗೆ ಕನಿಕರ ಹುಟ್ಟಿತು. ಮರಿಯನ್ನು ಎತ್ತಿಕೊಂಡು ತಾನೂ ಕುರುಬನೊಂದಿಗೆ ನಡೆದನು; ಅರಸನ ಮುಂದೆ ಬಂದು ನಿಂತನು. ಸಿದ್ಧಾರ್ಥನನ್ನು ನೋಡಿ ಎಲ್ಲರೂ ಚಕಿತರಾದರು. “ಸುಮ್ಮಸುಮ್ಮನೆ ಪ್ರಾಣಿಗಳನ್ನು ಆಹುತಿಕೊಟ್ಟರೆ ನಿಮಗೆ ಏನು ಬರುವುದು? ಯಾವನಿಗೆ ಪ್ರಾಣಿಗಳನ್ನು ಬದುಕಿಸಲು ಬರುವುದಿಲ್ಲವೋ ಅವನು ಅವುಗಳನ್ನು ಕೊಲ್ಲಬಾರದು” ಎಂದವನು ಬೋಧಿಸಿದನು. ಅರಸನು ಒಪ್ಪಿಕೊಂಡು ಬಲಿಕೊಡುವುದನ್ನು ನಿಲ್ಲಿಸಿದನು.
ಬಳಿಕ ಸಿದ್ಧಾರ್ಥನು ಅಲ್ಲಿಂದ ಮುಂದೆ ನಡೆದನು. ‘ಗಯಾ‘ ನಗರದ ಸಿದ್ಧಾರ್ಥನು ಬಳಿಯಲ್ಲಿ, ನಿರಂಜನಾನದಿಯ ದಂಡೆಯ ಮೇಲೆ ಇದ್ದ ಒಂದು ಅರಳೆಯ ಮರದ ಕೆಳಗೆ ಕುಳಿತು ದೇವರ ಧ್ಯಾನ ಮಾಡಹತ್ತಿದನು. ಅನ್ನ-ನೀರುಗಳನ್ನು ಮರೆತುಬಿಟ್ಟನು. ಎಷ್ಟೋ ದಿನಗಳು ಕಳೆದುವು. ಶರೀರವು ಸೊರಗಿಹೋಯಿತು. ಕೊನೆಗೊಂದು ದಿನ ಅವನಿಗೆ ಜ್ಞಾನವುಂಟಾಯಿತು. ಸಂಸಾರದ ಜಂಜಡದಿಂದ ಪಾರಾಗುವ ಉಪಾಯ ಹೊಳೆಯಿತು. ಅಲ್ಲಿಂದ ಎದ್ದು ಸಂಚರಿಸುತ್ತ ಜನರಿಗೆ ಉಪದೇಶ ಮಾಡಹತ್ತಿದನು. ಅಂದಿನಿಂದ ಸಿದ್ಧಾರ್ಥನು ಬುದ್ಧನಾದನು. ‘ಬುದ್ಧ‘ ಎಂದರೆ ಎಲ್ಲವನ್ನೂ ತಿಳಿದವ. ಬುದ್ಧನು ಹೊಸದೊಂದು ಧರ್ಮವನ್ನು ಸ್ಥಾಪಿಸಿದನು. ಅದಕ್ಕೆ ಬೌದ್ಧಧರ್ಮವೆಂದು ಹೆಸರು. ಗಯಾ ಪಟ್ಟಣವು ‘ಬುದ್ದಗಯೆ‘ ಎಂದೂ ಅವನು ಕುಳಿತು ತಪಸ್ಸು ಮಾಡಿದ ಸ್ಥಳದಲ್ಲಿದ್ದ ಅರಳೆಯ ಮರವು ‘ಬೋಧೀವೃಕ್ಷ‘ ಎಂದೂ ಈಗಲೂ ಹೆಸರಾಗಿವೆ.
‘ಬುದ್ಧ‘ ಎಂದರೆ ಎಲ್ಲವನ್ನೂ ತಿಳಿದವ. ಬುದ್ಧನು ಹೊಸದೊಂದು ಧರ್ಮವನ್ನು ಸ್ಥಾಪಿಸಿದನು. ಅದಕ್ಕೆ ಬೌದ್ಧಧರ್ಮವೆಂದು ಹೆಸರು. ಗಯಾ ಪಟ್ಟಣವು ‘ಬುದ್ದಗಯೆ‘ ಎಂದೂ ಅವನು ಕುಳಿತು ತಪಸ್ಸು ಮಾಡಿದ ಸ್ಥಳದಲ್ಲಿದ್ದ ಅರಳೆಯ ಮರವು ‘ಬೋಧೀವೃಕ್ಷ‘ ಎಂದೂ ಈಗಲೂ ಹೆಸರಾಗಿವೆ.
ಬುದ್ಧನು ಮೊದಲು ಉಪದೇಶ ಮಾಡಿದುದು ಕಾಶಿಯಲ್ಲಿ. ಆನಂದನೆಂಬವನು ಆತನ ಮೊದಲನೆಯ ಶಿಷ್ಯನು. ಮುಂದೆ 45 ವರುಷಗಳವರೆಗೆ ಬುದ್ದನು ಎಲ್ಲ ಕಡೆಗೆ ತಿರುಗಾಡಿ ಉಪದೇಶ ಮಾಡಿದನು. ಹಾಗೆಯೆ ಕಪಿಲವಸ್ತುವಿಗೆ ಬಂದನು. ಹೆಂಡತಿ ಯಶೋಧರೆ, ಮಗ ರಾಹುಲ ಅವನ ಧರ್ಮವನ್ನು ಸ್ವೀಕರಿಸಿದರು. ಯಶೋಧರೆ ‘ಭಿಕ್ಷುಣಿ’ ಎಂದರೆ ಬೌದ್ಧ ಸಂನ್ಯಾಸಿನಿಯಾದಳು. ಬುದ್ಧನು ಭಾರತದ ಬಹುಭಾಗವನ್ನು ಸುತ್ತಾಡಿ ತನ್ನ ಧರ್ಮವನ್ನು ಪ್ರಚಾರಮಾಡಿದನು. ಅವನು ಎಂಬತ್ತು ವರುಷ ಬದುಕಿ ನಿರ್ವಾಣವನ್ನು ಹೊಂದಿದನು.
“ಯಾವಾಗಲೂ ಸತ್ಯ ಮಾತಾಡಬೇಕು. ಎಲ್ಲರನ್ನೂ ಪ್ರೀತಿಸಬೇಕು. ನೀತಿಯಿಂದ ನಡೆಯಬೇಕು. ಯಾವ ಪಾಣಿಗೂ ನೋವನ್ನುಂಟುಬಾರದು. ವೈರವನ್ನು ಮಾಡದೆ, ಕೆಡುಕು ಮಾಡಿದವರಿಗೂ ಒಳಿತು ಮಾಡಬೇಕು, ದೀನದರಿದ್ರರ ಸೇವೆ ಮಾಡಬೇಕು” ಇವೇ ಬೌದ್ಧಧರ್ಮದ ಮುಖ್ಯ ಮಾತುಗಳು.
ಐತಿಹಾಸಿಕ ಕತೆಗಳು ಪುಸ್ತಕದಿಂದ ಸಂಗ್ರಹಿಸಿದ ಕತೆ. ಲೇಖಕರು: ಜಿ.ವಿ ಅಂಗಡಿ.