ಮಂಗಗಳ ಉಪವಾಸ – ಮಚ್ಚಿಮಲೆ ಶಂಕರನಾರಾಯಣ ಅವರ ಪದ್ಯ

ಬಾಳೆಯ ತೋಟದ ಪಕ್ಕದ ಕಾಡೊಳು
ವಾಸಿಸುತ್ತಿದ್ದವು ಮಂಗಗಳು;
ಮಂಗಗಳೆಲ್ಲವು ಒಟ್ಟಿಗೆ ಸೇರುತ
ಒಂದುಪವಾಸವ ಮಾಡಿದವು.
ಏನೂ ತಿನ್ನದೆ, ಮಟ ಮಟ ನೋಡುತ
ಇದ್ದವು ಮರದಲಿ ಕುಳಿತಲ್ಲೆ,
“ನಾಳೆಗೆ ತಿಂಡಿಯ ಈಗಲೆ ಹುಡುಕುವ
ಬನ್ನಿರಿ” ಎಂದಿತು ಕಪಿಯೊಂದು.
“ಹೌದೌದಣ್ಣ” ಎಂದೆನ್ನುತ ಎಲ್ಲವು
ಬಾಳೆಯ ತೋಟಕೆ ಹಾರಿದವು,
ತೋಟದಿ ಬಾಳೆಯ ಹಣ್ಣನು ನೋಡಲು
ಆಸೆಯು ಹೆಚ್ಚಿತು, ನೀರೂರಿ.
“ಸುಲಿದೇ ಇಡುವ ಆಗದೆ?” ಎಂದಿತು
ಆಸೆಯ ಮರಿಕಪಿಯೊಂದಾಗ;
“ಹೌದೌದೆ”ನ್ನುತ ಹಣ್ಣನು ಸುಲಿದವು,
ಕೈಯೊಳೆ ಹಿಡಿದು ಕುಳಿತಿರಲು.
“ಕೈಯಲ್ಲೇತಕೆ ಬಾಯೊಳಗಿಟ್ಟರೆ
ಆಗದೆ?” ಎಂದಿತು ಇನ್ನೊಂದು,
ಹಣ್ಣನು ಬಾಯಲಿ ಇಟ್ಟವು “ಜಗಿದೇ
ಇಡುವೆವು” ಎಂದಿತು ಮತ್ತೊಂದು.
ಜಗಿದೂ ಜಗಿದೂ, ನುಂಗಿದವೆಲ್ಲಾ
ಆಗಲೆ ಮುಗಿಯಿತು ಉಪವಾಸ.