ಒಂದು ಚಿನ್ನದ ಯುಗದ ಚಿತ್ರಣ : ಸಾಮ್ರಾಟ ಸಮುದ್ರಗುಪ್ತನ ಕತೆ

ಸಾಮ್ರಾಟ ಸಮುದ್ರಗುಪ್ತ

ಸುಮಾರು 1600 ವರುಷಗಳ ಹಿಂದೆ ಉತ್ತರ ಭಾರತದಲ್ಲಿ ಚಂದ್ರಗುಪ್ತನೆಂಬ ಅರಸನು ರಾಜ್ಯವಾಳುತ್ತಿದ್ದನು. ಅವನ ರಾಜಧಾನಿ ‘ಪಾಟಲಿಪುತ್ರ‘ ಎಂಬ ನಗರ. ಚಂದ್ರಗುಪ್ತನಿಗೆ ಕುಮಾರದೇವಿಯೆಂಬ ಹೆಂಡತಿ ಇದ್ದಳು. ಈ ದಂಪತಿಗಳಿಗೆ ನಾಲ್ಕು ಜನ ಗಂಡುಮಕ್ಕಳಿದ್ದರು. ಅವರಲ್ಲಿ ಸಮುದ್ರಗುಪ್ತನೇ ಎಲ್ಲ ರೀತಿಯಿಂದಲೂ ಪಟ್ಟಕ್ಕೆ ಯೋಗ್ಯನಾಗಿದ್ದನು. ಆದುದರಿಂದ ಚಂದ್ರಗುಪ್ತನ ಮರಣದ ತರುವಾಯ ಸಮುದ್ರಗುಪ್ತನೇ ಅರಸನಾದನು.

ಚಿಕ್ಕವನಿದ್ದಾಗಲೇ ಸಮುದ್ರಗುಪ್ತನು ತನ್ನ ಚುರುಕುಬುದ್ಧಿಯನ್ನೂ ವೀರತನವನ್ನೂ ತೋರ್ಪಡಿಸಿದ್ದನು. ಅರಸುಮಕ್ಕಳಿಗೆ ಬೇಕಾಗುವ ಎಲ್ಲ ವಿದ್ಯೆ-ಬುದ್ಧಿಗಳನ್ನೂ ಕಲಿತು ಅವನು ಜಾಣನಾದನು. ಸಮುದ್ರಗುಪ್ತನು ಮಹಾಧೈರ್ಯಶಾಲಿಯೂ ಆಗಿದ್ದನು. ಬುದ್ದಿ ಹಾಗು ಸಾಹಸಗಳು ಕೂಡಿದ ಮೇಲೆ ಕೇಳುವುದೇನು? ‘ಸಮುದ್ರಗುಪ್ತನು ಮುಂದೆ ದೊಡ್ಡ ಸಾರ್ವಭೌಮನಾಗುವುದರಲ್ಲಿ ಸಂದೇಹವಿಲ್ಲ’ ಎಂದು ಎಲ್ಲ ಜನರೂ ನುಡಿಯುತ್ತಿದ್ದರು. ಅದರಂತೆ ಅವನು ಅಶೋಕನ ತರುವಾಯ ಭಾರತದಲ್ಲಿಯೇ ದೊಡ್ಡ ಸಾರ್ವಭೌಮನಾಗಿ ಹೋದನು.

ಸಮುದ್ರಗುಪ್ತನು ಕ್ರಿ. ಶ. 320ರಲ್ಲಿ ಪಟ್ಟಕ್ಕೆ ಬಂದನು. ಆಗ ಅವನ ರಾಜ್ಯ ಚಿಕ್ಕದಾಗಿತ್ತು. ಕೆಲವೇ ದಿನಗಳಲ್ಲಿ ಅವನು ತನ್ನ ರಾಜ್ಯವನ್ನು ಬೆಳೆಸಲು ಪ್ರಾರಂಭಿಸಿದನು. ದೊಡ್ಡ ಸೈನ್ಯವನ್ನು ಕಟ್ಟಿಕೊಂಡು ಭಾರತದ ನಾಲ್ಕೂದಿಕ್ಕಿಗೆ ಹೋದನು. ಅಲ್ಲಲ್ಲಿಯ ಅರಸರನ್ನು ಗೆದ್ದನು. ಕೆಲವು ಜನ ಅರಸರ ರಾಜ್ಯಗಳನ್ನು ಕಸಿದುಕೊಂಡು ತನ್ನ ರಾಜ್ಯಕ್ಕೆ ಕೂಡಿಸಿಕೊಂಡನು. ಇನ್ನು ಕೆಲವು ಅರಸರನ್ನು ತನ್ನ ಮಾಂಡಲಿಕರನ್ನಾಗಿ ಮಾಡಿಕೊಂಡನು.

ಆಗ ದಕ್ಷಿಣಭಾರತದಲ್ಲಿ ಪಲ್ಲವವಂಶದ ದೊರೆಯಾದ ವಿಷ್ಣುಗೋಪನು ಕಂಚಿಯಲ್ಲಿ ಆಳುತ್ತಿದ್ದನು. ಅವನು ಸಮುದ್ರಗುಪ್ತನ ಶೌರ್ಯವನ್ನು ಕಂಡು ಅವನ ಮಾಂಡಲಿಕನಾಗಿ ಇರಲು ಒಪ್ಪಿಕೊಂಡನು; ಅವನಿಗೆ ಕಪ್ಪ ಕಾಣಿಕೆಗಳನ್ನೂ ಕೊಟ್ಟನು. ಹೀಗೆ ಸಮುದ್ರಗುಪ್ತನ ಸಾಮ್ರಾಜ್ಯವು ಉತ್ತರದಲ್ಲಿ ನೇಪಾಳದಿಂದ ದಕ್ಷಿಣದಲ್ಲಿ ಕಂಚಿಯವರೆಗೂ ಹಬ್ಬಿತು.

ಬಳಿಕ ಸಮುದ್ರಗುಪ್ತನು ಸಾರ್ವಭೌಮನೆನಿಸಿಕೊಳ್ಳಬೇಕೆಂದು ಅಶ್ವಮೇಧಯಾಗವನ್ನು ಆರಂಭಿಸಿದನು. ಯಾಗದ ಕುದುರೆಯ ಹಿಂದಿನಿಂದ ವಿಪುಲ ಸೈನ್ಯದೊಡನೆ ತಾನೇ ಹೊರಟನು. ಆ ಕುದುರೆಯನ್ನು ತಡೆಯುವ ಶಕ್ತಿ ಯಾರಲ್ಲಿಯೂ ಇರಲಿಲ್ಲ. ದಿಗ್ವಿಜಯದಿಂದ ತಿರುಗಿಬಂದು ಕ್ರಿ. ಶ. 350ರಲ್ಲಿ ಅವನು ತನ್ನ ಯಾಗವನ್ನು ಮುಗಿಸಿದನು. ಈ ಯಾಗದ ನೆನಪಿಗಾಗಿ ಯಜ್ಞದ ಕುದುರೆಯ ಗುರುತಿನ ನಾಣ್ಯಗಳನ್ನು ಮಾಡಿಸಿದನು; ಅಲ್ಲದೆ ಆ ನಾಣ್ಯಗಳ ಮೇಲೆ ತನ್ನ ಹಾಗು ತನ್ನ ರಾಣಿಯಾದ ದತ್ತಾದೇವಿಯ ಹೆಸರನ್ನು ಕೆತ್ತಿಸಿದನು.

ಯಜ್ಞದ ಕುದುರೆಯ ಗುರುತಿನ ನಾಣ್ಯ

ಸಮುದ್ರಗುಪ್ತನು ವೈದಿಕಧರ್ಮದ ಅನುಯಾಯಿ. ಆದರೆ ಅವನು ಪರಧರ್ಮದವರನ್ನು ಎಂದೂ ಪೀಡಿಸಲಿಲ್ಲ. ಎಲ್ಲರೂ ತಮ್ಮ ತಮ್ಮ ಧರ್ಮಗಳಂತೆ ನಡೆದುಕೊಳ್ಳಬೇಕೆಂದು ಹೇಳುತ್ತಿದ್ದನು. ಬುದ್ಧಗಯೆಯ ಯಾತ್ರೆಗೆ ಬರುವ ಬೌದ್ಧಯಾತ್ರಿಕರ ಸಲುವಾಗಿ, ಬುದ್ಧಗಯೆಯ ಹತ್ತಿರ ಅನೇಕ ಧರ್ಮಸಾಲೆಗಳನ್ನು ಕಟ್ಟಿಸಿದನು. ಇವನ ಶೌರ್ಯ ಸಾಹಸಗಳನ್ನೂ, ವೈಭವ ಹಾಗು ಘನತೆಯನ್ನೂ ಕಂಡು ಪರದೇಶದ ರಾಜರು ಇವನೊಡನೆ ಗೆಳೆತನ ಮಾಡಿದರು. ಸಿಲೋನದ ರಾಜನಾದ ಮೇಘುವರ್ಮನು ಇವನಲ್ಲಿ ತನ್ನ ರಾಯಭಾರಿಯನ್ನಿಟ್ಟು ಈತನ ರಾಯಭಾರಿಯನ್ನು ತನ್ನಲ್ಲಿ ಇಟ್ಟುಕೊಂಡಿದ್ದನು. ಇರಾಣದ ಅರಸನೂ ಸಮುದ್ರಗುಪ್ತನಿಗೆ ಕಪ್ಪ ಕಾಣಿಕೆಗಳನ್ನು ಕಳುಹುತ್ತಿದ್ದನು.

ಸಮುದ್ರಗುಪ್ತನು ಕೇವಲ ಯುದ್ಧವೀರನಾಗಿರದೆ ಒಳ್ಳೆಯ ರಸಿಕನೂ ಕಲಾಪ್ರಿಯನೂ ಆಗಿದ್ದನು. ಇವನು ದೊಡ್ಡ ಪಂಡಿತನೂ ಕವಿಯೂ ಆಗಿದ್ದನು. ತನ್ನ ರಾಜ್ಯದಲ್ಲಿ ಇರುವ ವಿದ್ವಾಂಸರಿಗೂ ಕವಿಗಳಿಗೂ ಆಶ್ರಯ ಕೊಡುತ್ತಿದ್ದನು. ಅಲ್ಲದೆ ತಾನೇ ಸ್ವತಃ ಗ್ರಂಥಗಳನ್ನು ಬರೆದಿರುವನು, ತನ್ನ ಮಾಂಡಲಿಕ ರಾಜರನ್ನು ಇವನು ಪ್ರೀತಿ-ಆದರಗಳಿಂದ ನಡೆಸಿಕೊಳ್ಳುತ್ತಿದ್ದನು. ಆದುದರಿಂದ ಎಲ್ಲರೂ ಇವನ ದೊಡ್ಡ ಮನಸ್ಸನ್ನು ಕಂಡು ಇವನನ್ನು ಬಹಳ ಗೌರವದಿಂದ ಕಾಣುತ್ತಿದ್ದರು! ಸಮುದ್ರಗುಪ್ತನ ರಾಜ್ಯದಲ್ಲಿ ಎಲ್ಲೆಲ್ಲಿಯೂ ಶಾಂತತೆಯು ನೆಲಸಿತ್ತು. ಉದ್ಯೋಗ-ವ್ಯವಸಾಯಗಳು ಚೆನ್ನಾಗಿ ಸಾಗಿದ್ದುವು. ಜನರು ಉಂಡು-ಉಟ್ಟು ಸುಖವಾಗಿದ್ದರು. ಆದುದರಿಂದ ಈ ರಾಜನ ಆಳ್ವಿಕೆಯ ಕಾಲವನ್ನು ‘ಸುವರ್ಣಯುಗ (ಬಂಗಾರದ ಯುಗ)’ ಎಂದು ಹೇಳುವರು. ಹೀಗೆ ಸಮ್ರಾಟ ಸಮುದ್ರಗುಪ್ತನು ಮಗಧ ಸಾಮ್ರಾಜ್ಯವನ್ನು ಒಳ್ಳೆಯ ಘನತೆಯಿಂದ ಆಳಿ ಕ್ರಿ. ಶ. 380 ರಲ್ಲಿ ಮಡಿದನು.

ಐತಿಹಾಸಿಕ ಕತೆಗಳು ಪುಸ್ತಕದಿಂದ ಸಂಗ್ರಹಿಸಿದ ಕತೆ. ಲೇಖಕರು: ಜಿ.ವಿ ಅಂಗಡಿ.

Leave a Reply

Your email address will not be published. Required fields are marked *