ನಜರೇತಿನ ಯೇಸುಕ್ರಿಸ್ತ: ಒಬ್ಬ ಮನುಷ್ಯನೋ ದೇವರ ಮಗನೋ?

ಯೇಸುಕ್ರಿಸ್ತ

ಭೂಮಧ್ಯಸಮುದ್ರದ ಪೂರ್ವ ದಂಡೆಯ ಮೇಲೆ ಪಾಲಿಸ್ಟೈನ್(Palestine) ಎಂಬ ದೇಶವಿದೆ. ನಝರೇತ್ (Nazareth) ಎಂಬುದು ಅಲ್ಲಿಯದೊಂದು ಚಿಕ್ಕ ಪಟ್ಟಣ. ಅಲ್ಲಿ ಒಬ್ಬ ಬಡವನಾದ ಬಡಗಿ ಇದ್ದನು. ಆತನ ಹೆಸರು ಜೋಸೆಫ್. ಅವನಿಗೆ ಮೇರಿ ಎಂಬ ಹೆಂಡತಿ ಇದ್ದಳು. ಅವರಿಬ್ಬರೂ ದುಡಿದು ಪಡೆದುದರಲ್ಲಿಯೆ ಸುಖವಾಗಿ ಸಂಸಾರ ಸಾಗಿಸಿಕೊಂಡು ಇದ್ದರು. ಒಂದು ದಿನ ಮೇರಿಯ ಕನಸಿನಲ್ಲಿ ಒಬ್ಬ ದೇವದೂತನು ಬಂದು “ದೇವರ ಕುಮಾರನು ನಿನ್ನ ಹೊಟ್ಟೆಯಿಂದ ಜನಿಸುವನು. ಅವನಿಂದ ಜಗದ ರಕ್ಷಣೆಯಾಗುವುದು. ಅವನಿಗೆ ಯೇಸು (ರಕ್ಷಕ) ಎಂದು ಹೆಸರಿಡಬೇಕು” ಎಂದು ಹೇಳಿದಂತಾಯಿತು. ಕನಸಿನ ಮಾತುಗಳು ನನಸಾಗಿ, ಮೇರಿಯು ಗರ್ಭವತಿಯಾದಳು.

ಪಾಲಿಸ್ಟೈನ್ ಪ್ರದೇಶವು ಆಗಸ್ಟಸ್ ಸೀಝರ್ ಎಂಬ ಸಾರ್ವಭೌಮರಾಜನ ಆಡಳಿತಕ್ಕೆ ಒಳಪಟ್ಟಿತ್ತು. ಅವನು ತನ್ನ ಸಾಮ್ರಾಜ್ಯದಲ್ಲೆಲ್ಲ ಜನಗಣನೆ ಮಾಡಲು ಆಜ್ಞೆ ವಿಧಿಸಿದನು. ಜನರು ಎಲ್ಲಿದ್ದರೂ ತಮ್ಮ ಮೂಲಮನೆತನದ ಊರುಗಳಿಗೇ ಹೋಗಿ ಲೆಕ್ಕವನ್ನು ಬರೆಸಬೇಕು!’ ಎಂದು ಅವನ ಕಟ್ಟಳೆಯಿತ್ತು. ಕಾರಣ ಜೋಸಫನು ಗರ್ಭಿಣಿಯಾದ ತನ್ನ ಹೆಂಡತಿಯೊಡನೆ, ತನ್ನ ಮನೆತನದ ಊರಾದ ಬೆತ್ಲೆಹೇಮಿಗೆ(Bethlehem) ಹೋದನು. ಇವರು ಹೋಗುವುದರೊಳಗಾಗಿ, ಬೇರೆಬೇರೆ ಕಡೆಯಿಂದ ಜನರು ಬಂದು ಅಲ್ಲಿಯ ಛತ್ರಗಳೂ, ದೇವಸ್ಥಾನಗಳೂ ತುಂಬಿಹೋಗಿದ್ದುವು. ಬೇರೆ ಎಡೆಯಿಲ್ಲದೆ ಇವರು ಒಂದು ದನದ ಕೊಟ್ಟಿಗೆಯಲ್ಲಿ ಉಳಿದುಕೊಂಡರು. ಆಗ ಮೇರಿಯು ದಿನತುಂಬಿದ ಗರ್ಭಿಣಿ. ಆ ಕೊಟ್ಟಿಗೆಯಲ್ಲಿರುವಾಗಲೇ ಅವಳು ಗಂಡುಕೂಸನ್ನು ಹಡೆದಳು. ಪಾಪ! ಹಸುಮಗುವಿಗೆ ಹೊದಿಸಲು ಹೆಚ್ಚಾಗಿ ಒಟ್ಟೆ ಬರೆ ಕೂಡ ಇರಲಿಲ್ಲ. ಮಲಗಿಸಲು ತೊಟ್ಟಲಿರಲಿಲ್ಲ. ಮೇರಿಯು ತನ್ನಲ್ಲಿದ್ದ ಅಲ್ಪ ಸ್ವಲ್ಪ ಬಟ್ಟೆಯನ್ನೇ ಬೆಚ್ಚಗೆ ಹೊದಿಸಿ ಹುಲ್ಲಿನ ಮೇಲೆ ಕೂಸನ್ನು ಮಲಗಿಸಿದಳು. ಹುಟ್ಟಿದ ಮಗುವಿಗೆ ‘ಯೇಸು’ ಎಂದು ಹೆಸರಿಟ್ಟರು.

ಯೇಸು ಹುಟ್ಟಿದ ರಾತ್ರಿ, ಬೆತ್ಲೆಹೇಮ್ ನಗರದ ಸಮೀಪದ ಗುಡ್ಡಗಾಡಿನಲ್ಲಿ ಕುರಿಕಾಯುತ್ತಿದ್ದ ಕುರುಬರಿಗೆ, ಆಕಾಶದಲ್ಲಿ ಒಂದು ಪ್ರಕಾಶಮಾನವಾದ ಬೆಳಕು ಕಂಡಿತಂತೆ. ಆಗಲೇ ದೇವದೂತನೊಬ್ಬನು ಬಂದು “ಎಲ್ಲರನ್ನೂ ರಕ್ಷಿಸುವ ಯೇಸು-ಯೆಹೂದ್ಯರ ಅರಸು-ಬೆತ್ಲೆಹೇಮಿನಲ್ಲಿ, ಒಂದು ದನಗಳ ಕೊಟ್ಟಿಗೆಯಲ್ಲಿ ಹುಟ್ಟಿದ್ದಾನೆ” ಎಂದು ಹೇಳಿ ಮಾಯವಾದನಂತೆ. ಆಗ ಕುರುಬರು ಮಗುವನ್ನು ಹುಡುಕಿಕೊಂಡು ಬೆತ್ಲೆಹೇಮಿಗೆ ಬಂದರು. ಮಗುವನ್ನು ಕಂಡು ಅವರಿಗೆ ಆನಂದವಾಯಿತು. ಅವರು ಆ ದೇವಕುಮಾರನಿಗೆ ನಮಸ್ಕಾರಮಾಡಿ ತಿರುಗಿ ಹೋದರು; ಜನರಲ್ಲಿ ಆ ಸುದ್ದಿಯನ್ನು ಹರಡಿದರು.

ಕೆಲವು ದಿನಗಳು ಕಳೆದುವು. ಮನೆತನದ ನಿಯಮದ ಪ್ರಕಾರ, ಗಂಡ- ಹೆಂಡತಿ ಇಬ್ಬರೂ, ಜೆರುಸಲೇಮಿನಲ್ಲಿ ಇರುವ ದೇವಾಲಯಕ್ಕೆ ಮಗುವನ್ನು ತೆಗೆದುಕೊಂಡು ಹೋದರು. ಅಲ್ಲಿಯ ಪಂಡಿತರೂ ಧರ್ಮಗುರುಗಳೂ ಮಗುವನ್ನು ಕಂಡರು! ತಮ್ಮನ್ನು ಉದ್ಧರಿಸುವ ಮಹಾತ್ಮನು ಹುಟ್ಟಿಬಂದಿದ್ದಾನೆಂದು ಅವರು ಮಗುವನ್ನು ಮುದ್ದಿಸಿ ನಮಸ್ಕರಿಸಿದರು. ಬಳಿಕ ಆ ದಂಪತಿಗಳು ಪುಟ್ಟ ಯೇಸುವಿನೊಡನೆ ಬೆತ್ಲೆಹೇಮಿಗೆ ಮರಳಿದರು.

ಆಗ ಜೆರುಸಲೇಮಿನಲ್ಲಿ ಹೆರೋದನೆಂಬ(Herod) ಅರಸನು ಆಳುತ್ತಿದ್ದನು. ಯೇಸುವು ಹುಟ್ಟಿದ ಸಮಾಚಾರ ಅವನ ಕಿವಿಗೆ ಮುಟ್ಟಿತು. ಅದನ್ನು ಕೇಳಿ ಅವನಿಗೆ ಭಯವಾಯಿತು. ಎಲ್ಲಿ ತನ್ನ ಅರಸೊತ್ತಿಗೆಯು ಹೋಗುವುದೋ ಎಂದು ಅವನು ಕಳವಳಗೊಂಡನು. ಆಗ ಅವನು ಬೆತ್ಲೆಹೇಮಿನಲ್ಲಿ ಮತ್ತು ಅದರ ಸುತ್ತು ಮುತ್ತಲಿನ ಊರುಗಳಲ್ಲಿ ಇರುವ ಎರಡು ವರುಷಕ್ಕಿಂತ ಕಡಿಮೆ ವಯಸ್ಸಿನ ಗಂಡುಮಕ್ಕಳನ್ನೆಲ್ಲ ಕೊಲ್ಲುವಂತೆ ತನ್ನ ಸೇವಕರಿಗೆ ಅಪ್ಪಣೆ ಮಾಡಿದನು. ಆದರೆ ಜೋಸೆಫನು ಅವರ ಕಣ್ಣು ತಪ್ಪಿಸಿ, ಹೆಂಡತಿ ಹಾಗು ಮಗುವಿನೊಡನೆ ಇಜಿಪ್ತಿಗೆ(Egypt) ಓಡಿಹೋದನು. ಮುಂದೆ ಕೆಲವು ದಿವಸಗಳಲ್ಲಿ ಹೆರೋದನು ಮರಣಹೊಂದಲು, ಜೋಸೆಫನು ಹೆಂಡತಿ ಮಗನೊಡನೆ ಮತ್ತೆ ನಝರೇತಿಗೆ ಬಂದನು.

ಯೇಸುವು ಬೆಳೆದು ದೊಡ್ಡವನಾದನು; ತಂದೆಯ ಬಳಿಯಲ್ಲಿಯೆ ವಿದ್ಯೆ ಬುದ್ದಿಗಳನ್ನು ಕಲಿತನು. ತಂದೆಯ ಉದ್ಯೋಗವಾದ ಬಡಿಗತನವನ್ನೂ ಕಲಿತುಕೊಂಡನು. ಪ್ರತಿವರುಷ ‘ಪೆಸಾಕ್’ ( Pesach in Hebrew) ಹಬ್ಬಕ್ಕೆ ಬೆತ್ಲೆಹೇಮಿನಿಂದ ಜೋಸೆಫ್ ಮತ್ತು ಮೇರಿ ಇವರು ಯೇಸುವಿನೊಡನೆ ಜೆರುಸಲೇಮಿಗೆ ಬರುತ್ತಿದ್ದರು. ಅಲ್ಲಿ ಪಂಡಿತರು ದೇವಾಲಯದಲ್ಲಿ ಕುಳಿತು ಧರ್ಮದ ಚರ್ಚೆಯನ್ನು ಮಾಡುತ್ತಿದ್ದರು. ಬಾಲಕನಾದ ಯೇಸುವು ಅವರ ಮಧ್ಯದಲ್ಲಿ ಕುಳಿತು ಶಾಂತಚಿತ್ತದಿಂದ ಅದನ್ನು ಆಲಿಸುತ್ತಿದ್ದನು. ನಡುನಡುವೆ ಅವರಿಗೆ ಪ್ರಶ್ನೆಗಳನ್ನೂ ಕೇಳುತ್ತಿದ್ದನು. ಬಾಲಕನ ಚುರುಕುಬುದ್ಧಿಯನ್ನು ಕಂಡು ಪಂಡಿತರಿಗೆ ಆಶ್ಚರವೆನಿಸುತ್ತಿತ್ತು.

ಪ್ರತಿ ವರ್ಷ, ಈಸ್ಟರ್‌ನ ಅದೇ ಸಮಯದಲ್ಲಿ (ಇದು ವಾರ್ಷಿಕವಾಗಿ ಬದಲಾಗುತ್ತದೆ) ಯಹೂದಿ ಕುಟುಂಬಗಳು ಈಜಿಪ್ಟ್‌ನಲ್ಲಿ ಗುಲಾಮಗಿರಿಯಿಂದ ಇಸ್ರೇಲೀಯರನ್ನು ಪಾರು ಮಾಡುವುದನ್ನು ಹೀಬ್ರೂನಲ್ಲಿ ಪಾಸೋವರ್ – ಪೆಸಾಕ್ ( Pesach in Hebrew) ಹಬ್ಬದೊಂದಿಗೆ ಸ್ಮರಿಸುತ್ತಾರೆ.

ಮುಂದೆ ಕೆಲವು ವರುಷಗಳಲ್ಲಿ ಜೋಸೆಫನು ತೀರಿಕೊಂಡನು. ಮನೆತನದ ಭಾರವೆಲ್ಲ ಯೇಸುವಿನ ಮೇಲೆಯೇ ಬಿದ್ದಿತು. ಬಡಗಿತನವನ್ನು ಮಾಡಿ ಅವನು ಮನೆತನವನ್ನು ನಡೆಸಹತ್ತಿದ್ದನು. ಜನರು ಕಷ್ಟದಲ್ಲಿ ಇರುವುದನ್ನು ಕಂಡರೆ ಯೇಸುವಿನ ಮನಸ್ಸು ಕರಗಿಹೋಗುವುದು. ಅವರಿಗೆ ಬೇಕಾದ ನೆರವನ್ನೂ ಅವನು ಕೊಡುವನು. ಯೇಸುವಿನ ನಡತೆಯನ್ನು ಕಂಡು ಎಲ್ಲರೂ ಅವನನ್ನು ಪ್ರೀತಿಸುತ್ತಿದ್ದರು.

ಬರುಬರುತ್ತ ಯೇಸುವಿಗೆ ಯೋಹಾನನೆಂಬವನ(Yohana) ಗೆಳೆತನವಾಯಿತು. ಅವನಿಂದಲೇ ಯೇಸುವು ಧರ್ಮದ ದೀಕ್ಷೆಯನ್ನು ಪಡೆದನು. ಮುಂದೆ ನಾಲ್ಪತ್ತು ದಿನಗಳವರೆಗೆ ನಿರಾಹಾರದಿಂದಿದ್ದು, ಕಾಡಿನಲ್ಲಿ ತಪಸ್ಸನ್ನು ಮಾಡಿದನು. ಬಳಿಕ ಅವನು ಜನರಿಗೆ ತನ್ನ ಧರ್ಮದ ದಾರಿಯನ್ನು ಬೋಧಿಸತೊಡಗಿದನು. ಸೈತಾನನೆಂಬ ದುಷ್ಟನು ಅವನ ಏಳಿಗೆಯನ್ನು ಸೈರಿಸದೆ, ಅವನನ್ನು ಕೊಲ್ಲಲು ಬಗೆಬಗೆಯ ಹಂಚಿಕೆಗಳನ್ನು ಮಾಡಿದನು. ಆದರೆ ಅದು ಸಾಧ್ಯವಾಗಲಿಲ್ಲ.

ಮುಂದೆ ಹಾಗೆಯೆ ಧರ್ಮವನ್ನು ಉಪದೇಶಿಸುತ್ತ, ಯೇಸುವು ಅತ್ತಿತ್ತ ತಿರುಗಾಡಹತ್ತಿದನು. ಅವನಿಗೆ ಹನ್ನೆರಡು ಜನ ನಂಬಿಗೆಯ ಶಿಷ್ಯರು ಸಿಕ್ಕರು. ಅವರೊಡನೆ ಅವನು ಜೆರೂಸಲೇಮಿಗೆ(Jerusalem) ಬಂದನು. ಅಲ್ಲಿ ಕೂಡಿದ್ದ ಯೆಹೂದ್ಯರಿಗೆ, ಅವರ ಶಾಸ್ತ್ರಿಗಳೂ ಧರ್ಮದ ಮುಖಂಡರೂ ಮಾಡುವ ಅನ್ಯಾಯ ಮೋಸಗಳನ್ನು ತಿಳಿಸಿದನು. ಇದರಿಂದ ಅವರು ಯೇಸುವಿನ ಮೇಲೆ ಸಿಟ್ಟಾದರು. ಹೇಗಾದರೂ ಮಾಡಿ ಅವನನ್ನು ಕೊಲ್ಲಬೇಕೆಂದು ಹಂಚಿಕೆ ಹಾಕಿದರು. ರಾತ್ರಿ ಸಮಯದಲ್ಲಿ, ಯೇಸುವು ಶಿಷ್ಯರೊಡನೆ ದೇವರ ಪ್ರಾರ್ಥನೆ ಮಾಡುವಾಗ ಅವನನ್ನು ಹಿಡಿಸಿದರು. ಪರಿಪರಿಯಿಂದ ಅವನಿಗೆ ತೊಂದರೆ ಕೊಟ್ಟರು. ಪಿಲಾತನೆಂಬ(Pilate) ನ್ಯಾಯಾಧೀಶನ ಬಳಿಗೆ ಒಯ್ದು ಅವನ ಅಪರಾಧದ ವಿಚಾರಣೆ ನಡೆಯುವಂತೆ ಮಾಡಿದರು. ಯೇಸುವು ನಿರ್ದೋಷಿಯಾಗಿದ್ದರೂ, ಅವನ ವೈರಿಗಳಿಗೆ ಬೆದರಿ ಪಿಲಾತನು, ಯೇಸುವಿಗೆ ಮರಣದಂಡನೆಯ ಶಿಕ್ಷೆಯನ್ನು ವಿಧಿಸಿದನು.

ಶಿಲುಬೆಗೆ ಏರಿಸಲು ಯೇಸುವನ್ನು ಕರೆದುಕೊಂಡು ಹೋದರು. ಆಗ ಮುಳ್ಳಿನ ಕಿರೀಟವನ್ನು ಅವನ ತಲೆಯ ಮೇಲಿರಿಸಿ ನೆತ್ತಿಯ ಮೇಲೆ ಜಡಿದರು. ವಿರೋಧಿಗಳಾದ ಜನರು ಯೇಸುವನ್ನು ಒದೆದರು; ಅವನ ಮುಖದ ಮೇಲೆ ಉಗುಳಿದರು. ಕೊನೆಗೆ ಶಿಲುಬೆಯ ಮೇಲೆ ಏರಿಸಿ ಕೈಕಾಲುಗಳಲ್ಲಿ ಮೊಳೆಗಳನ್ನು ಜಡಿದರು. ಆದರೂ ಯೇಸು ಶಾಂತಚಿತ್ತದಿಂದ ದೇವರನ್ನು ಧ್ಯಾನಿಸುತ್ತಿದ್ದನು. ‘ತಂದೆಯೇ! ತಿಳಿಯದೆ ಮಾಡಿದ ಇವರ ತಪ್ಪುಗಳನ್ನು ಕ್ಷಮಿಸು!’ ಎಂದು ದೇವರನ್ನು ಬೇಡಿಕೊಂಡು ಪ್ರಾಣಬಿಟ್ಟನು. ಯೇಸುವಿನ ಕೆಲವು ಶಿಷ್ಯರೂ ಪ್ರಾಣಕ್ಕೆ ಎರವಾಗಬೇಕಾಯಿತು.

ಯೇಸುವಿನ ದೇಹವನ್ನು ಅವನ ಶಿಷ್ಯನೊಬ್ಬನು ಒಯ್ದು ತನ್ನ ತೋಟದಲ್ಲಿ ಹೂಳಿದನು. ಆಮೇಲೆ ಮೂರು ದಿವಸಕ್ಕೆ ಭೂಕಂಪವಾಯಿತಂತೆ. ಯೇಸುವಿನ ಹೆಣವು ಗೋರಿಯಿಂದ ಮಾಯವಾಯಿತಂತೆ. ಯೇಸುವು ಮತ್ತೆ ಜೀವಂತನಾಗಿ ನಾಲ್ವತ್ತು ದಿನಗಳವರೆಗೆ ತನ್ನ ಮತವನ್ನು ಕುರಿತು ಬೋಧಿಸಿದನೆಂದೂ, ಕೊನೆಯ ದಿನ ಗುಡ್ಡದ ಮೇಲೆ ನಿಂತು ಬೋಧಿಸುತ್ತಿದ್ದ ಹಾಗೆಯೆ ಅವನು ದೇವಲೋಕಕ್ಕೆ ಏರಿಹೋದನೆಂದೂ ಕ್ರೈಸ್ತರು ನಂಬುತ್ತಾರೆ.

ಯೇಸುವಿಗೆ ಕ್ರಿಸ್ತನೆಂಬ(Jesus Christ) ಹೆಸರು ಅವನು ಸತ್ತ ಮೇಲೆ ಬಂದಿತು. ಕ್ರಿಸ್ತ ಎಂಬುದು ಗ್ರೀಕ್ ಭಾಷೆಯ ಪದವು; ಅದರ ಅರ್ಥ ‘ಜಗದೋದ್ಧಾರಕ‘ ಎಂದು.

ಯೇಸುವಿಗೆ ಕ್ರಿಸ್ತನೆಂಬ(Jesus Christ) ಹೆಸರು ಅವನು ಸತ್ತ ಮೇಲೆ ಬಂದಿತು. ಕ್ರಿಸ್ತ ಎಂಬುದು ಗ್ರೀಕ್ ಭಾಷೆಯ ಪದವು; ಅದರ ಅರ್ಥ ‘ಜಗದೋದ್ಧಾರಕ‘ ಎಂದು. ಮೊದಲು ಯೇಸುವೆಂದು ಇದ್ದ ಹೆಸರು ಮುಂದೆ ‘ಯೇಸೂಕ್ತಿಸ್ತ‘ ಎಂದಾಯಿತು. ಯೇಸೂಕ್ರಿಸ್ತನು ಹೊಸದೊಂದು ಧರ್ಮವನ್ನೇ ಸ್ಥಾಪಿಸಿದನು. ಅದರ ಹೆಸರು ಕ್ರೈಸ್ತಧರ್ಮ. ಆ ಧರ್ಮದ ಗ್ರಂಥವು ‘ಬೈಬಲ್‘(Bible), ಅದರಲ್ಲಿ ಯೇಸುವಿನ ಧರ್ಮಬೋಧನೆಯ ವಚನಗಳು ಇರುವುವು.

ಐತಿಹಾಸಿಕ ಕತೆಗಳು ಪುಸ್ತಕದಿಂದ ಸಂಗ್ರಹಿಸಿದ ಕತೆ. ಲೇಖಕರು: ಜಿ.ವಿ ಅಂಗಡಿ.

Leave a Reply

Your email address will not be published. Required fields are marked *